ಕಣ್ಣೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶ ವಿರೋಧಿಯಾಗಿದ್ದು ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಕಾಂಗ್ರೆಸ್ ದೇಶ ವಿರೋಧಿ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ದೇಶದ ವಿರುದ್ಧ ಶತ್ರುಗಳ ವಿರುದ್ಧ ಹೋರಾಟ ನಡೆಸಿದ ನೂರಾರು ವರ್ಷಗಳ ದಾಖಲೆ ಕಾಂಗ್ರೆಸ್ ಗಿದೆ ಎಂದರು.
ಶತ್ರುಪಡೆಗಳ ವಿರುದ್ಧ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹೋರಾಡಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವವರಲ್ಲಿ ಪ್ರಧಾನಿ ಮೋದಿ ಮುಂಚೂಣಿಯಲ್ಲಿದ್ದು ಅವರು ದೇಶವನ್ನು ಇಬ್ಘಾಗ ಮಾಡಲು ಹೊರಟಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಕೃಷಿ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದು ದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಯುವಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿರುವುದು ಕೂಡ ಮತ್ತೊಂದು ದೇಶ ವಿರೋಧಿ ಕೃತ್ಯ. ಮೋದಿಯವರು ಈ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು ಇದಕ್ಕೆಲ್ಲಾ ಅವರು ಉತ್ತರ ಕೊಡಬೇಕು, ಮೋದಿಯವರಿಗೆ ಕೇರಳ, ಒಡಿಶಾ ಮತ್ತು ದೆಹಲಿಯಲ್ಲಿ ಮಾಧ್ಯಮಗಳನ್ನು ಎದುರಿಸುವ ಶಕ್ತಿಯಿಲ್ಲ ಎಂದು ಟೀಕಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಮೂರು ವಿಷಯಗಳು ಮುಖ್ಯ ಪಾತ್ರ ವಹಿಸುತ್ತದೆ. ಅವುಗಳೆಂದರೆ ಭಾರತದ ಆರ್ಥಿಕತೆ, ವೈಯಕ್ತಿಕ ಭ್ರಷ್ಟಾಚಾರ ಮತ್ತು ದೇಶದ ರೈತರ ದುಸ್ಥಿತಿ. ಈ ಬಾರಿ ಯುಪಿಎ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇವೆ ಎಂದರು.
ಕಣ್ಣೂರಿನಿಂದ ಅವರು ತಮ್ಮ ಸ್ವಕ್ಷೇತ್ರ ವಯನಾಡಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ.