ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಾಗ್ಯ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಈ ದೇಶದ ಶ್ರೀಮಂತ ಹಿಂದೂ ನಾಗರಿಕತೆಯನ್ನು ಭಯೋತ್ಪಾದಕತೆಯೆಂದು ಹಣೆಪಟ್ಟಿ ನೀಡುವವರಿಗೆ ಕೊಟ್ಟಿರುವ ಪ್ರತ್ಯುತ್ತರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸಾದ್ವಿ ಪ್ರಾಗ್ಯ ಸಿಂಗ್ ಅವರ ಸ್ಪರ್ಧೆ ಕಾಂಗ್ರೆಸ್ ಗೆ ದುಬಾರಿಯಾಗಿ ಪರಿಣಮಿಸಲಿದೆ ಎಂದು ಹೇಳಿದರು.
ನಿನ್ನೆ ಟೌಮ್ಸ್ ನೌ ಆಂಗ್ಲ ಸುದ್ದಿವಾಹಿನಿಗೆ ಸಂದರ್ಶನ ನೀಡಿ ಮಾತನಾಡಿದ ಅವರು, ಸಂಜೌತ ಎಕ್ಸ್ ಪ್ರೆಸ್ ಸ್ಫೋಟ ಮತ್ತು ನ್ಯಾಯಾಧೀಶ ಬಿ ಎಚ್ ಲೊಯ ಅವರ ಸಾವಿನ ಕುರಿತಾದಂತಹ ಘಟನೆಗಳ ಬಗ್ಗೆ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಲು ಮಾಡಸ್ ಆರಪೆಂಡಿ ವಿಧಾನ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಸಾಧ್ವಿ ಪ್ರಗ್ಯಾ ಅವರನ್ನು ಕಣಕ್ಕಿಳಿಸಿರುವುದನ್ನು ಸಮರ್ಥಿಸಿಕೊಂಡ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಅಮೇಥಿ, ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಅವರು ಕೂಡ ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದು ಜಾಮೀನಿನ ಮೇಲೆ ಹೊರಗಿದ್ದು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಅವರ ಬಗ್ಗೆ ಏಕೆ ಯಾರೂ ಆಕ್ಷೇಪವೆತ್ತುವುದಿಲ್ಲ ಎಂದು ಪ್ರಶ್ನಿಸಿದರು.
ಒಬ್ಬ ಮಹಿಳೆ ಅದರಲ್ಲೂ ಸಾಧ್ವಿ ಬಗ್ಗೆ ಇಷ್ಟೊಂದು ಅವಮಾನಕರವಾಗಿ ಟೀಕೆಗಳನ್ನು ಮಾಡಲಾಗುತ್ತಿದೆ. ಸಂಜೌತ ಎಕ್ಸ್ ಪ್ರೆಸ್ ತೀರ್ಪು ಹೊರಬಿದ್ದಿದೆ. ಅದರಲ್ಲಿ ಏನು ಹೊರಬಂದಿದೆ. ಯಾವುದೇ ಸಾಕ್ಷಿಗಳಿಲ್ಲದೆ 5 ಸಾವಿರ ವರ್ಷಗಳ ನಾಗರಿಕತೆ ಹೊಂದಿರುವ ಹಿಂದೂ ನಾಗರಿಕತೆಯನ್ನು ಇಷ್ಟೊಂದು ಅವಮಾನ ಮಾಡಲಾಗುತ್ತಿದೆ. ಹಿಂದೂ ಧರ್ಮ ಇಡೀ ವಿಶ್ವಕ್ಕೆ ಒಂದು ಎಂಬ ಸಂದೇಶ ನೀಡಿದೆ. ಇಂತಹ ನಾಗರಿಕತೆಯನ್ನು ನೀವು ಭಯೋತ್ಪಾದಕರೆಂದು ಕರೆಯುತ್ತೀರಿ. ಹೀಗೆ ಅವಮಾನಿಸುವವರಿಗೆಲ್ಲಾ ಉತ್ತರವಾಗಿ ಸಾಧ್ವಿ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಇದು ಕಾಂಗ್ರೆಸ್ ಗೆ ದುಬಾರಿಯಾಗಲಿದೆ ಎಂದರು.