ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮತ್ತು ಯುಪಿಎ ಮೈತ್ರಿಕೂಟಗಳಿಗೆ ಸ್ಪಷ್ಟ ಬಹುಮತ ಸಿಕ್ಕಿ ಅಧಿಕಾರ ಪಡೆಯುವುದು ಕಷ್ಟವಿದೆ. ಇಂತಹ ಸಂದರ್ಭದಲ್ಲಿ ದೇಶದ ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಿಂದ 6 ಪ್ರಮುಖ ರಾಜಕೀಯ ಪಕ್ಷಗಳು ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸುವ ಸಾಧ್ಯತೆಯಿದೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರ ಎಸ್ ಪಿ ಮತ್ತು ಬಿಎಸ್ಪಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್, ಒಡಿಶಾದಲ್ಲಿ ನವೀನ್ ಪಾಟ್ನಾಯಕ್ ಅವರ ಬಿಜೆಡಿ ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಮತ್ತು ಆಂಧ್ರ ಪ್ರದೇಶದಲ್ಲಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಒಟ್ಟು ಸಂಸದ ಸ್ಥಾನಗಳ ಪೈಕಿ ಶೇಕಡಾ 20ರಷ್ಟು ಗಳಿಸುವ ಸಾಧ್ಯತೆಯಿದೆ.
ಹೀಗಾಗಿ ಸರ್ಕಾರ ರಚನೆಯಲ್ಲಿ ಈ ಆರು ಪಕ್ಷಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಟ್ಟು 42 ಲೋಕಸಭಾ ಸ್ಥಾನಗಳ ಪೈಕಿ 30ರಿಂದ 35 ಸ್ಥಾನಗಳು ಈ ಎರಡೂ ಪಕ್ಷಗಳು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಸರ್ಕಾರ ರಚನೆಯಲ್ಲಿ ತಾವಿಬ್ಬರೂ ಒಂದೇ ದೋಣಿಯಲ್ಲಿ ಕಾಲಿಡುವ ಸಾಧ್ಯತೆಯನ್ನು ಈ ಇಬ್ಬರು ನಾಯಕರು ಸುಳಿವು ನೀಡಿದ್ದಾರೆ. 2014ರಲ್ಲಿ ಒಡಿಶಾದಲ್ಲಿ ಬಂದ ಫಲಿತಾಂಶ ಮರುಕಳಿಸದಿದ್ದರೂ ಕೂಡ ಒಟ್ಟು 21 ಸೀಟುಗಳ ಪೈಕಿ ನವೀನ್ ಪಟ್ನಾಯಕ್ ಅವರ ಪಕ್ಷಕ್ಕೆ 14ರಿಂದ 15 ಸೀಟುಗಳು ಸಿಗುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಉತ್ತಮ ಫಲಿತಾಂಶ ತೋರಿದರೂ ಕೂಡ ಮಮತಾ ಬ್ಯಾನರ್ಜಿಯವರ ಪಕ್ಷ ಕೂಡ ಹಿಂದೆ ಬೀಳುವಂತೆ ಕಾಣುತ್ತಿಲ್ಲ. ಅದು ಕಾಂಗ್ರೆಸ್ ಮತ್ತು ಎಡರಂಗಗಳಿಗೆ ದುಬಾರಿಯಾಗುವ ಸಾಧ್ಯತೆಯಿದೆ. ಒಟ್ಟು 42 ಸೀಟುಗಳ ಪೈಕಿ ತೃಣಮೂಲ ಕಾಂಗ್ರೆಸ್ ಗೆ 34 ಸೀಟು ಬರುವ ಸಾಧ್ಯತೆಯಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಒಟ್ಟಾಗಿ ಕನಿಷ್ಟ 40 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಅತಂತ್ರ ಸ್ಥಿತಿ ನಿರ್ಮಾಣವಾದರೆ ಮಮತಾ ಬ್ಯಾನರ್ಜಿಯವರು ಯುಪಿಎ ಬೆಂಬಲಿಸುವುದು ಸಂಶಯ. ಕೆಸಿಆರ್ ಮತ್ತು ಜಗನ್ ಎಲ್ಲಾ ಆಯ್ಕೆಗಳಿಗೆ ಮುಕ್ತವಾಗಿದ್ದರೆ ನವೀನ್ ಪಟ್ನಾಯಕ್ ಅವರ ನಿರ್ಧಾರ ಹೇಳಲು ಸಾಧ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಯುಪಿಎ ಬೆಂಬಲಿಸುತ್ತವೆಯೋ ಎಂದು ಕಾದು ನೋಡಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos