ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮುಂಬೈ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 50 ಸೀಟುಗಳು ಸಹ ಸಿಗುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬೈಯ ಬಿಕೆಸಿ ಮೈದಾನದಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬದಲಿ ಸರ್ಕಾರವನ್ನು ಜನರು ಬಯಸುತ್ತಿಲ್ಲ, ಬದಲಿಗೆ ದೇಶದಲ್ಲಿ ನಿರ್ಣಾಯಕ, ಬಡವರ ಏಳಿಗೆಗೆ ಶ್ರಮಿಸುವ ಮತ್ತು ಭಯೋತ್ಪಾದನೆಯನ್ನು ಕೊನೆಗಾಣಿಸುವ ದಿಟ್ಟ ನಿರ್ಧಾರ ಕೈಗೊಳ್ಳಲು ಎನ್ ಡಿಎ ಮೈತ್ರಿಕೂಟದ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರುತ್ತದೆ ಎಂದು ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಎಷ್ಟು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂಬುದಿರುವುದು ಎಂದು ಮೋದಿ ಹೇಳಿದರು.
ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ-ಯುವತಿಯರು ಮತ್ತು 20ನೇ ಶತಮಾನದ ಕೊನೆ ಭಾಗದಲ್ಲಿ ಹುಟ್ಟಿದವರು ಮೋದಿಯವರನ್ನು ಏಕೆ ಬೆಂಬಲಿಸುತ್ತಾರೆ ಎಂದು ವಿರೋಧ ಪಕ್ಷದವರು ಅಚ್ಚರಿಪಡುತ್ತಿದ್ದಾರೆ. ಅವರ ಆಸೆ-ಆಕಾಂಕ್ಷೆಗಳಿಗೆ ಮೋದಿಯವರು ಭಾವನೆಗಳನ್ನು ತುಂಬುವುದೇ ಅದಕ್ಕೆ ಕಾರಣವಾಗಿದೆ. ಇವರೆಲ್ಲ 2047ರಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಣೆಯನ್ನು ಇದಿರು ನೋಡುತ್ತಿದ್ದಾರೆ. ಆದರೆ ಕೆಲವರು ಇನ್ನೂ 20ನೇ ಶತಮಾನದಲ್ಲಿದ್ದಾರೆ. ಇಂದಿನ ಯುವಜನತೆ ಏನನ್ನು ಬಯಸುತ್ತಾರೆ, ಅವರ ನಿರೀಕ್ಷೆಗಳೇನು ಎಂದು ಅರ್ಥವಾಗುವುದಿಲ್ಲ ಎಂದರು.