ನವದೆಹಲಿ: ಕೇಂದ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಪ್ರಧಾನಿ ಹುದ್ದೆಗಾಗಿ ಪಟ್ಟು ಹಿಡಿಯುವುದಿಲ್ಲ. ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮ ಮುಖ್ಯ ಗುರಿ ಎಂದಿದ್ದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಯೂ-ಟರ್ನ್ ಹೊಡೆದಿದ್ದು, ಕಾಂಗ್ರೆಸ್ ಪ್ರಧಾನಿ ಹುದ್ದೆಗಾಗಿ ಹಕ್ಕು ಮಂಡಿಸಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನಿ ಹುದ್ದೆ ಕೇಳುವುದಿಲ್ಲ ಎಂಬುದು ತಪ್ಪು ಎಂದಿರುವ ಗುಲಾಂ ನಬಿ ಆಜಾದ್, ಶತಮಾನ ಹಳೆಯ ಹಾಗೂ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ನಿಶ್ಚಿತವಾಗಿಯೂ ಪ್ರಧಾನಿ ಹುದ್ದೆಗಾಗಿ ಹಕ್ಕು ಮಂಡಿಸಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನಿ ಹುದ್ದೆಗೆ ಹಕ್ಕು ಮಂಡಿಸುವುದಿಲ್ಲ ಎಂದರೆ ಪ್ರಧಾನಿ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂದು ಅರ್ಥವಲ್ಲ. ನಾವು ನಿಜಕ್ಕೂ ದೊಡ್ಡಪಕ್ಷ ಹಾಗೂ ಅತ್ಯಂತ ಹಳೆಯ ಪಕ್ಷವಾಗಿದ್ದೇವೆ. ಅವಕಾಶ ದೊರೆತರೆ ಐದು ವರ್ಷಗಳ ಕಾಲ ಸರ್ಕಾರ ನಡೆಸಲು ಅತಿದೊಡ್ಡ ಪಕ್ಷಕ್ಕೆ ಗೊತ್ತಿದೆ ಎಂದು ಆಜಾದ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ನಿನ್ನೆ ಚುನಾವಣೆ ಮುಗಿಯುವುದಕ್ಕೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂದು ಲೇವಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಇನ್ನೂ ಮುಗಿದಿಲ್ಲ. ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿಲ್ಲ. ಮತಗಳ ಎಣಿಕೆಯೂ ಆರಂಭವಾಗಿಲ್ಲ. ಆಗಲೇ ಕಾಂಗ್ರೆಸ್ ನಾಯಕರು ಸೋಲೊಪ್ಪಿಕೊಂಡು ಪ್ರಧಾನಿ ಹುದ್ದೆಗೆ ಹಕ್ಕು ಮಂಡಿಸುವುದಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos