ದೇಶ

ಬಿಜೆಪಿ ಔತಣಕೂಟದಲ್ಲಿ ಲೋಕಸಭೆ ಚುನಾವಣಾ ಪ್ರಚಾರವನ್ನು ತೀರ್ಥಯಾತ್ರೆಗೆ ಹೋಲಿಸಿದ ಪ್ರಧಾನಿ ಮೋದಿ!

Srinivasamurthy VN
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನನ್ನ ಪಾಲಿಗೆ ತೀರ್ಥಯಾತ್ರೆಯಂತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಧಾನಿ ದೆಹಲಿಯ ಅಶೋಕ ಹೊಟೆಲ್​ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಏರ್ಪಡಿಸಿದ್ದ 'ಆಭಾರ್ ಮಿಲನ್' ಔತಣಕೂಟದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎನ್ ಡಿಎ ಮೈತ್ರಿಕೂಟದ 36 ಪಕ್ಷಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, 'ಎನ್​ಡಿಎ ಮೈತ್ರಿಕೂಟ ನಿಜಾರ್ಥದಲ್ಲಿ ಭಾರತದ ಆತ್ಮವಾಗಿದ್ದು, ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಅದೊಂದು ಆಧಾರಸ್ತಂಭವಾಗಿದೆ ಎಂದು ಹೇಳಿದರು.
ಅಂತೆಯೇ 'ನಾನು ಸಾಕಷ್ಟು ಚುನಾವಣೆಗಳನ್ನು ಎದುರಿಸಿದ್ದೇನೆ. ಆದರೆ ಈ ಚುನಾವಣೆ ನನ್ನ ಪಾಲಿಗೆ ಅತ್ಯಂತ ಮಹತ್ವದ ಚುನಾವಣೆಯಾಗಿದ್ದು, ಇದು ನನಗೆ ತೀರ್ಥಯಾತ್ರೆಯಂತೆ ಅನುಭವವಾಯಿತು. ಇದು ಜನರಿಗಾಗಿ ಪಕ್ಷ ಏಕಾಂಗಿ ಸ್ಪರ್ಧೆ ಮಾಡಿದಂತಿರಲಿಲ್ಲ. ಜನರೇ ಪಕ್ಷಕ್ಕಾಗಿ ಹೋರಾಟ ನಡೆಸಿದಂತಿತ್ತು ಎಂದು ಹೇಳಿದರು. ಅಂತೆಯೇ ತಮಗೆ ಸಹಕರಿಸಿದ ಕ್ಯಾಬಿನೆಟ್ ತಮ್ಮ ಸಹೋದ್ಯೋಗಿ ಸಚಿವರಿಗೂ ಧನ್ಯವಾದ ತಿಳಿಸಿದ  ಪ್ರಧಾನಿ ಮೋದಿ, 'ತಮ್ಮ ಈ ಅಧಿಕಾರಾವಧಿಯಲ್ಲಿ ಎನ್​ಡಿಎ ಮೈತ್ರಿ ಕೂಟ ಜೊತೆಯಾಗಿ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅಲ್ಲದೇ, ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ  ಎಂದು ಹೇಳಿದರು. 
ಇನ್ನು ಇಂದಿನ ಔತಣಕೂಟದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಜೆಡಿಯು ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡಿನ ಸಿಎಂ ಪಳನಿ ಸ್ವಾಮಿ, ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಸೇರಿದಂತೆ ಎನ್ ಡಿಎ ಮೈತ್ರಿಕೂಟದ 36 ಪಕ್ಷಗಳ ಎಲ್ಲ ಮುಖಂಡರು ಭಾಗಿಯಾಗಿದ್ದರು.
SCROLL FOR NEXT