ರಾಂಪುರ್: ನಿನ್ನೆಯಷ್ಟೇ ಉತ್ತರ ಪ್ರದೇಶದ ರಾಂಪುರ್ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು, ಒಂದು ವೇಳೆ ಎಲ್ಲಾ ಸಮಾಜದಿಂದಲೂ ನನಗೆ ಮತಗಳು ಬರದಿದ್ದರೆ ಮುಂದಿನ ಎಂಟು ದಿನಗಳಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶುಕ್ರವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಜಂ ಖಾನ್, ನನಗೆ ಎಲ್ಲಾ ಸಮಾಜದವರೂ ಮತ ನೀಡಿದ್ದಾರೆ. ಒಂದು ವೇಳೆ ಇದು ಸುಳ್ಳು ಎಂದು ಸಾಬೀತಾದರೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಅರೋಪ- ಪತ್ಯಾರೋಪಗಳ ಮೂಲಕ ದೇಶದ ಗಮನ ಸೆಳೆದಿದ್ದ ರಾಂಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜಂ ಖಾನ್ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ 1 ಲಕ್ಷ 40ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಅಜಂ ಖಾನ್ ಅವರಿಗೆ ಮೂರು ದಿನಗಳ ಕಾಲ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ನಿಷೇಧ ವಿಧಿಸಿತ್ತು.