ಮೋದಿ ಹೊಸ ಸಂಪುಟದಲ್ಲಿ ಹಳಬರಿಗೆ ಬಡ್ತಿ, ಹೊಸಬರಿಗೆ ಮಣೆ
ನವದೆಹಲಿ: ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಗೆಲುವಿನ ಸಂಭ್ರಮದಲ್ಲಿ ಬೀಗುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಾರಿ ತಮ್ಮ ಸಚಿವ ಸಂಪುಟದಲ್ಲಿ ಹಳಬರ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ನಿಚ್ಚಳವಾಗಿದೆ.
ಹಾಲಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಬಹುತೇಕರಿಗೆ ಒಳ್ಳೆಯ ಖಾತೆ ಮತ್ತು ಬಡ್ತಿ ಸಿಗುವ ಸಾಧ್ಯತೆಗಳು ನಿಚ್ಚಳವಾಗಿದೆ.
ಆರೋಗ್ಯ ದೃಷ್ಟಿಯ ಕಾರಣದಿಂದ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೊಸ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.
ಇನ್ನು ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿರುವ ನಟಿ ಸ್ಮೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಅವರುಗಳು ಈ ಬಾರಿ ಪ್ರಮುಖ ಖಾತೆಗಳನ್ನು ಪಡೆಯುವುದರ ಜೊತೆಗೆ ತಮ್ಮ ಪ್ರಭಾವವನ್ನು ಸಂಪುಟದಲ್ಲಿ ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ ಮುಕ್ತಾರ್ ಅಬ್ಬಾಸ್ ನಖ್ವಿ, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೂ ಆಯಕಟ್ಟಿನ ಹುದ್ದೆಗಳು ದೊರಕಲಿವೆ ಎಂಬ ಮಾತು ಕೇಳಿ ಬರುತ್ತಿವೆ.
ಕೇಂದ್ರ ಗೃಹ ಸಚಿವರಾಗಿದ್ದ ರಾಜ್ನಾಥ್ ಸಿಂಗ್ ಅವರಿಗೆ ಈ ಬಾರಿ ರಕ್ಷಣಾ ಖಾತೆಯ ಜವಾಬ್ದಾರಿ ಸಿಗಲಿದೆ ಎಂಬ ಮಾತು ರಾಷ್ಟ್ರ ರಾಜಧಾನಿಯಲ್ಲಿ ಗುನುಗುಡುತ್ತಿದೆ.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿರುವ ಚಿತ್ರನಟ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಮತ್ತು ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪರಾಭವಗೊಳಿಸಿರುವ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರಿಗೂ ಪ್ರಮುಖ ಖಾತೆ ದೊರೆಯಬಹುದು ಎಂಬ ಆಶಯ ಚಿಗುರೊಡೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos