ಬೆಂಗಳೂರು: ಕಾಂಗ್ರೆಸ್ ನೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅದಕ್ಕೆ ಮತ್ತೊಂದು ಉದಾಹರಣೆ ಕಾಂಗ್ರೆಸ್ ನ ಮಾಜಿ ಸಚಿವ ಜೆ ಅಲೆಕ್ಸಾಂಡರ್ ರಾಜೀನಾಮೆ. ಪಕ್ಷದಲ್ಲಿ ಅಸಮಾಧಾನವುಂಟಾಗಿ ತಾವು ರಾಜೀನಾಮೆ ನೀಡಿದ್ದೀರಾ ಎಂದು ಅವರನ್ನು ಕೇಳಿದರೆ ಉತ್ತರವಿಲ್ಲ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಜೆ ಅಲೆಕ್ಸಾಂಡರ್ ಕಾಂಗ್ರೆಸ್ ಗೆ ಸೇರಿ ನಂತರ ಶಾಂತಿನಗರ/ಸರ್ವಜ್ಞನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಒಂದು ಬಾರಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು. ಕಾಂಗ್ರೆಸ್ ತೊರೆದಿದ್ದು ತಮ್ಮ ವೈಯಕ್ತಿಕ ನಿರ್ಧಾರವಾಗಿದ್ದು ತಮ್ಮ ಪತ್ನಿ ಡೆಲ್ಫಿನ್ ಅಲೆಕ್ಸಾಂಡರ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವುದರಿಂದ ಅವರನ್ನು ನೋಡಿಕೊಳ್ಳಬೇಕಿದೆ ಎಂದಿದ್ದಾರೆ. ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ ತಕ್ಷಣಕ್ಕೆ ಇಲ್ಲ ಎಂದಿದ್ದಾರೆ.
ಕಳೆದ ಮೂರು ಸಲ ಸರ್ವಜ್ಞನಗರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅಲೆಕ್ಸಾಂಡರ್ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಅದು ಸಚಿವ ಕೆ ಜೆ ಜಾರ್ಜ್ ಪಾಲಾಯಿತು. ಅಲೆಕ್ಸಾಂಡರ್ ಅವರ ಹೆಸರನ್ನು ಬೆಂಗಳೂರು ಕೇಂದ್ರ ಭಾಗಕ್ಕೆ ಆರಂಭದಲ್ಲಿ ಪರಿಗಣಿಸಲಾಗಿತ್ತಾದರೂ ಅಂತಿಮ ಪಟ್ಟಿಯಲ್ಲಿ ಕೈಬಿಡಲಾಯಿತು.