ಕರ್ನಾಟಕ

ಕೊನೆಗೂ ಅಸಮಾಧಾನಕ್ಕೆ ತೆರೆ: ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಪರ ತೇಜಸ್ವಿನಿ ಪ್ರಚಾರ

Raghavendra Adiga
ಬೆಂಗಳೂರು: ಕಳೆದ ವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡೆಸಿದ್ದ ರೋಡ್ ಶೋ ನಲ್ಲಿ  ಪಾಲ್ಗೊಂಡಿದ್ದ ಮಾಜಿ ಸಂಸದ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಶುಕ್ರವಾರ 28 ವರ್ಷದ ತೇಜಸ್ವಿ ಸೂರ್ಯ ಪರ ಅಧಿಕೃತ ಪ್ರಚಾರ ಪ್ರಾರಂಭಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ನೂತನ ಉಪಾಧ್ಯಕ್ಷೆಯಾಗಿರುವ ತೇಜಸ್ವಿನಿ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಪಡೆಯುವುದು ಕಡೇ ಕ್ಷಣದಲ್ಲಿ ತಪ್ಪಿಹೋಗಿತ್ತು. 
ತೇಜಸ್ವಿನಿ ತಾವು ಶುಕ್ರವಾರ ತೇಜಸ್ವಿ ಸೂರ್ಯ ಪರ ನಡೆಸಿದ್ದ ಪ್ರಚಾರ ಅಭಿಯಾನದ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.
"ನಾನು ಈ ಮೊದಲೂ ಇದನ್ನೇ ಹೇಳಿದ್ದೆ, ನನಗೆ ಎಂದಿಗೂ ದೇಶವೇ ಮೊದಲು. ನಾನು ಗುರುವಾರದಿಂದ ನೆಲಮಟ್ಟದೈಂದ ಜನರನ್ನು ಭೇಟಿಯಾಗುತ್ತಿದ್ದೇನೆ. ಆದರೆ ಶುಕ್ರವಾರ ವಿವಿಧ ಸ್ಥಳಗಳಲ್ಲಿ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ" ತೇಜಸ್ವಿನಿ ಹೇಳಿದ್ದಾರೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಜನಪ್ರಿಯ ನಾಯಕಿಯಾಗಿ ಸಾಮಾಜಿಕ ಕೆಲಸ ಕಾರ್ಯ, ಪರಿಸರ ಕಾಳಜಿ, ಅಪೌಷ್ಟಿಕತೆ ಮತ್ತು  ಝೀರೋ ಗಾರ್ಬೇಜ್ ಸಮಸ್ಯೆಗಳನ್ನು ಬಹಳ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಬಿಜೆಪಿ ಉಪಾಧ್ಯಕ್ಷೆಯೂ ಆಗಿರುವ ತೇಜಸ್ವಿನಿಯವರ ಮೇಲೆ ಇನ್ನಷ್ಟು ಜವಾಬ್ದಾರಿಗಳು ಇದೆ.
"ಈ ಮುನ್ನ ನಾನು ಅನಂತ್ ಕುಮಾರ ಅವರಿಗೆ ಬೆಂಬಲವಾಗಿಯಷ್ಟೇ ಪ್ರಚಾರದಲ್ಲಿ ಬಾಗವಹಿಸುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಉಪಾಧ್ಯಕ್ಷೆಯಾಗಿ ಪಕ್ಷದೊಂದಿಗೆ ನೇರವಾದ ಸಂಬಂಧ ಹೊಂದಿದ್ದು ಪ್ರಚಾರದ ಕಣಕ್ಕಿಳಿದಿದ್ದೇನೆ.ಇದು ನನಗೆ ಹೊಸದಾಗಿದ್ದು ನಾನಿನ್ನೂ ಕಲಿಯಬೇಕಾಗಿರುವುದು ಸಾಕಷ್ಟಿದೆ."
ತೇಜಸ್ವಿನಿ ಶುಕ್ರವಾರ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತಬೇಟೆ ನಡೆಸಿದ್ದಾರೆ. ಅವರು ಕ್ಷೇತ್ರದ ಮಹಿಳಾ ಮತದಾರರನ್ನು ಕೇಂದ್ರವಾಗಿರಿಸಿಕೊಂಡು ಮತ ಕೇಳಿದ್ದಾರೆ."ಈಗ ನನ್ನ ಕಾರ್ಯವ್ಯಾಪ್ತಿ ಬೆಂಗಳೂರಿನಿಂದ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ ಎನ್ನುವುದನ್ನು ನಾನು ನನ್ನ ಬೆಂಬಲಿಗರಿಗೆ ಹೇಳುತ್ತೇನೆ"  ಅವರು ಹೇಳಿದ್ದಾರೆ. 
"ಮೋದಿ ಮತ್ತೊಮ್ಮೆ", "ದೇಶವೇ ಮೊದಲು" ಎನ್ನುವುದು ತೇಜಸ್ವಿನಿಯವರ ಪ್ರಚಾರದ ಘೋಷವಾಕ್ಯಗಳಾಗಿದ್ದವು.
SCROLL FOR NEXT