ಬೆಂಗಳೂರು: ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿಗರ ಮನೆ, ವಾಣಿಜ್ಯ ಸಂಕೀರ್ಣಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದ್ದು, ಬಿಜೆಪಿ ವಿರೋಧಿಸುವ ರಾಜಕೀಯ ನಾಯಕರುಗಳು ಹಾಗೂ ಮತದಾರರನ್ನು ಬೆದರಿಸುವ ತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಬಿಜೆಪಿ ಬೆಂಬಲಿಗರು ಅಥವಾ ನಾಯಕರ ಮೇಲೆ ದಾಳಿ ನಡೆಸದ ಆದಾಯ ತೆರಿಗೆ ಇಲಾಖೆ ಆಡಳಿತಾರೂಢ ಬಿಜೆಪಿಯ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಲಾಗಿದೆ.
ಚುನಾವಣೆಗಾಗಿ ಬಿಜೆಪಿಗೆ ಹಣಕಾಸು ಸಂಗ್ರಹಿಸುತ್ತಿರುವ ರೈಲ್ವೆ ,ಕೇಂದ್ರ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಮೇಲೂ ದಾಳಿ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ