ಬಳ್ಳಾರಿ: ಲೋಕಸಭಾ ಚುನಾವಣೆಯ ನಿಮಿತ್ತ ನಿನ್ನೆ ನಡೆದ 2ನೇ ಹಂತದ ಮತದಾನ ಪ್ರಕ್ರಿಯೆಲ್ಲಿ ಮತದಾನ ಮಾಡದೇ ಬಳ್ಳಾರಿಯ ಪ್ರಚಾರ ಕಾರ್ಯಕ್ರಮದಲ್ಲಿ ಬಿಸಿಯಾಗಿದ್ದ ಬಳ್ಳಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಎಸ್ ಉಗ್ರಪ್ಪ ಅವರು ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಮತದಾರರಾಗಿದ್ದು, ಗುರುವಾರ ಮತಚಲಾಯಿಸಬೇಕಿತ್ತು. ಆದರೆ ನಿನ್ನೆ ಬಳ್ಳಾರಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಉಗ್ರಪ್ಪ ಅವರು ಮತದಾನದಿಂದ ದೂರ ಉಳಿದಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಮತನೀಡಿ ಎಂದು ಕೇಳುವ ಜನಪ್ರತಿನಿಧಿಯೇ ಮತದಾನದಿಂದ ತಪ್ಪಿಸಿಕೊಂಡರೆ ಪ್ರಜೆಗಳಿಗೆ ಯಾವ ಸಂದೇಶ ರವಾನೆಯಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಗ್ರಪ್ಪ ಅವರು, 'ಮತ ಚಲಾಯಿಸದೇ ಇರುವ ಬಗ್ಗೆ ನೋವಿದೆ. ನಾನೇ ಯುದ್ಧರಂಗದಲ್ಲಿರುವುದರಿಂದ ಬೆಂಗಳೂರಿಗೆ ಹೋಗಲು ಆಗಲಿಲ್ಲ' ಎಂದು ಹೇಳಿದರು.