ಕುಣಿಗಲ್ : ಮತದಾನ ಮಾಡಲು ಊರಿಗೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ಆಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶಾಂತಮ್ಮ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಮಲ್ಲಾಘಟ್ಟ ಗ್ರಾಮದವರಾದ ಇವರು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಮತದಾನ ಮಾಡಲು ಗುರುವಾರ ಬೆಳಗ್ಗೆ ಸ್ವಗ್ರಾಮ ಮಲ್ಲಾಘಟ್ಟಕ್ಕೆ ತೆರಳಲು ಬೆಂಗಳೂರಿನಿಂದ ಕುಣಿಗಲ್ ಪಟ್ಟಣಕ್ಕೆ ಬಂದಿದ್ದರು.
ಮೋದೂರಿನ ಅಜ್ಜಿ ಮನೆಯಲ್ಲಿದ್ದ ಮಗಳ ದಾರಿ ಕಾಯುತ್ತಾ ಹುಚ್ಚ ಮಾಸ್ತಿಗಡ ವೃತ್ತದ ತಂಗುದಾಣದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಕೆಲ ದುಷ್ಕರ್ಮಿಗಳು, ನಿಮ್ಮ ಸಂಬಂಧಿ ಮತ ಚಲಾಯಿಸಲು ಕರೆತರಲು ಹೇಳಿದ್ದಾರೆ ಎಂದು ನಂಬಿಸಿ ಟಾಟಾ ಸುಮೊ ವಾಹನದ ಬಳಿ ಕರೆದೊಯ್ಡು ಥಳಿಸಿ ಅಪಹರಣ ಮಾಡಿದ್ದಾರೆ. ಅವರ ಬಳಿಯಿದ್ದ 30 ಗ್ರಾಂ ಚಿನ್ನದ ಸರ , 6 ಸಾವಿರ ರೂ ನಗದು, ಮೊಬೈಲ್ ದೋಚಿದ್ದಾರೆ.
ಚಿನ್ನದ ಸರದಲ್ಲಿದ್ದ ಮಾಂಗಲ್ಯ 500 ರೂಪಾಯಿಯನ್ನು ನೀಡಿ ಕಾಡಶೆಟ್ಟಿಹಳ್ಳಿ ಬಳಿ ವಾಹನದಿಂದ ಆ ಮಹಿಳೆಯನ್ನು ತಳ್ಳಿ ಪರಾರಿಯಾಗಿದ್ದಾರೆ. ನಂತರ ಮಹಿಳೆ ಸ್ಥಳೀಯರ ನೆರವಿನಿಂದ ಬಂದು ಕುಣಿಗಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.