ಕರ್ನಾಟಕ

ಗೆಲ್ಲುವ ವ್ಯಕ್ತಿಗೆ ಬಿಜೆಪಿಯಿಂದ ಟಿಕೆಟ್: ಮಗನ ಸ್ಪರ್ಧೆಗೆ ಉಮೇಶ್ ಜಾಧವ್ ಸಮರ್ಥನೆ

Nagaraja AB

ಕಲಬುರಗಿ: ಗೆಲ್ಲುವ ವ್ಯಕ್ತಿಗೆ ಟಿಕೆಟ್  ನೀಡುವ ಲೆಕ್ಕಾಚಾರದೊಂದಿಗೆ ಬಿಜೆಪಿ ಪಕ್ಷ  ತಮ್ಮ ಪುತ್ರನಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ನೂರಕ್ಕೆ ನೂರರಷ್ಟು ತಮ್ಮ ಮಗ ಚುನಾವಣೆಯಲ್ಲಿ ಗೆಲ್ಲಲಿದ್ದಾನೆ ಎಂದು ಮಾಜಿ ಶಾಸಕ ಡಾ.ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಮಗನ ಸ್ಪರ್ಧೆಯನ್ನು ಸಮರ್ಥಿಸಿಕೊಂಡಿದ್ದಾರೆ

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಉಪಚುನಾವಣೆಯಲ್ಲಿ ತಮ್ಮ ಮಗ ಅವಿನಾಶ  ಜಾಧವ್‍ಗೆ  ಟಿಕೆಟ್​ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಈ ಮೊದಲು ತಮ್ಮ ಸಹೋದರನಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸಹೋದರ ರಾಮಚಂದ್ರ ಜಾಧವ್ ಟಿಕೆಟ್ ​  ನಿರಾಕರಿಸಿದ್ದರಿಂದ ಅವಿನಾಶ್​ಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ತಂದೆ-ಮಕ್ಕಳ  ರಾಜಕಾರಣಕ್ಕೆ ತಾವೆಂದೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಮಲ್ಲಿಕಾರ್ಜುನ್ ಖರ್ಗೆ ಅವರ ಅತಿಯಾದ ವ್ಯಾಮೋಹದಿಂದ  ಮಗನನ್ನು ಮಂತ್ರಿ ಮಾಡಿದರು. ಹಾಗಾಗಿ ಇದಕ್ಕೆ ವಿರೋಧ ಮಾಡಿದ್ದೆವು ಎಂದು ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡರು.ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏ 29ರ  ಸೋಮವಾರದಂದು ಅವಿನಾಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

ಚಿಂಚೋಳಿ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದಾಗಿ ಈ ಹಿಂದೆ ಪ್ರಿಯಾಂಕಾ ಖರ್ಗೆ ಭರವಸೆ ನೀಡಿದ್ದರು. ಅದರಂತೆ ಕ್ಷೇತ್ರವನ್ನು ಅವರು ದತ್ತು ಪಡೆಯಲಿಲ್ಲ, ಕ್ಷೇತ್ರದ ಅಭಿವೃದ್ಧಿಗೂ ಸಹಕಾರ ನೀಡಲಿಲ್ಲ ಎಂದು ಆರೋಪಿಸಿದ ಜಾಧವ್,  ಪ್ರಿಯಾಂಕ್ ಖರ್ಗೆ ತಮ್ಮ ಮಗನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲಿಸಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಮಾತನಾಡಿದ ಅವಿನಾಶ್​ ಜಾಧವ್​ , ಚಿಂಚೋಳಿ ಕ್ಷೇತ್ರವನ್ನು ತಮ್ಮ ತಂದೆ ಅಭಿವೃದ್ಧಿ ಮಾಡಿದ್ದಾರೆ. ಈಗ ತಮಗೆ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿ  ಕೊಡುತ್ತಿದ್ದಾರೆ.ರಾಜಕೀಯ ಎಂದರೆ ಅಭಿವೃದ್ಧಿ ಮಾತ್ರ ಎಂದು ತಿಳಿದುಕೊಂಡಿದ್ದೇನೆ. ಯುವಕರು  ರಾಜಕೀಯಕ್ಕೆ ಹೆಚ್ಚು ಬರುತ್ತಿದ್ದು, ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ತಿಳಿಸಿದರು.

SCROLL FOR NEXT