ಚಿತ್ರದುರ್ಗ: ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯಲು ಚಿತ್ರದುರ್ಗದ ಬೋವಿ ಗುರುಪೀಠ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕದೆ ನೋಟಾ ಆಯ್ಕೆಯನ್ನು ಚಲಾಯಿಸುವುದಾಗಿ ನಿರ್ಧರಿಸಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೋವಿ ಗುರುಪೀಠದ ಸ್ವಾಮೀಜಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಚಿತ್ರದುರ್ಗದಲ್ಲಿ ಸುಮಾರು 2 ಲಕ್ಷ ಬೋವಿ ಜನಾಂಗದ ಮತದಾರರಿದ್ದರೂ ಕೂಡ ಈ ಸಮಾಜ ಹಲವು ವರ್ಷಗಳಿಂದ ತುಳಿತಕ್ಕೊಳಗಾಗಿದ್ದು ಸೌಲಭ್ಯವಂಚಿತವಾಗಿದೆ. ಚಿತ್ರದುರ್ಗ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬೋವಿ ಜನಾಂಗದ ಒಬ್ಬರಿಗೆ ಕೂಡ ಚುನಾವಣೆಯಲ್ಲಿ ನಿಲ್ಲುವ ಅವಕಾಶ ಸಿಕ್ಕಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಹೀಗಾಗಿ ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬೋವಿ ಜನಾಂಗದವರಿಗೆ ಈ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಿರ್ದೇಶನ ನೀಡಲು ಮಠ ನಿರ್ಧರಿಸಿದೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಬೋವಿ ಜನಾಂಗದವರು ಚುನಾವಣೆಗೆ ನಿಂತರೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕಾಂಗ್ರೆಸ್ಸಾಗಲಿ, ಬಿಜೆಪಿಯಾಗಲಿ ಈ ನಿಟ್ಟಿನಲ್ಲಿ ಯೋಚಿಸಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಲು ಈ ಬಾರಿ ಬೋವಿ ಜನಾಂಗದವರು ಮತ ಹಾಕದಂತೆ ಹೇಳುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ನಾಡಿದ್ದು 30 ಅಥವಾ ಏಪ್ರಿಲ್ 1ರಂದು ನಡೆಯಲಿರುವ ಬೋವಿ ಜನಾಂಗದ ಸಮಾವೇಶದಲ್ಲಿ ಇದನ್ನು ಜನರ ಮುಂದೆ ಪ್ರಸ್ತಾಪಿಸಲಾಗುವುದು. ಈ ಹಿಂದೆ ಬೋವಿ ಜನಾಂಗದವರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಿ ಎಂ ಚಂದ್ರಪ್ಪ ಮತ್ತು ಗೂಳಿಹಟ್ಟಿ ಡಿ ಶೇಖರ್ ಅವರ ಗೆಲುವಿಗೆ ಕಾರಣರಾಗಿದ್ದರು. ಆದರೆ ಈ ಬಾರಿ ಬಿಜೆಪಿ ಭರವಸೆ ನೀಡಿದ್ದರೂ ಕೂಡ ಜನಾರ್ದನ ಸ್ವಾಮಿ, ಮಾನಪ್ಪ ವಿಜ್ಜಲ್ ಮತ್ತು ಸೋಮಶೇಖರ್ ಅವರ ಹೆಸರುಗಳನ್ನು ಪರಿಗಣಿಸದೆ ಮಾದಿಗ ಸಮುದಾಯದ ಆನೆಕಲ್ ನಾರಾಯಣಸ್ವಾಮಿ ಅವರನ್ನು ನಿಲ್ಲಿಸಿದೆ. ಇದು ಬೋವಿ ಜನಾಂಗದ ಅಸಮಾಧಾನಕ್ಕೆ ಕಾರಣವಾಗಿದ್ದು ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳಿಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos