ಕರ್ನಾಟಕ

ಇವಿಎಂ ಅಭ್ಯರ್ಥಿಗಳಲ್ಲಿ ನಿಖಿಲ್ ಗೆ ಮೊದಲ ಸ್ಥಾನ, ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

Sumana Upadhyaya
ಬೆಂಗಳೂರು: ವಿದ್ಯುನ್ಮಾನ ಮತಯಂತ್ರದಲ್ಲಿ ಅಭ್ಯರ್ಥಿಗಳ ಕ್ರಮ ಸಂಖ್ಯೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮೊದಲ ಸ್ಥಾನ ಸಿಕ್ಕಿರುವುದು ಮತ್ತು ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಲೋಪದೋಷವಾಗಿದೆ ಎಂಬ ವಾದ-ವಿವಾದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿ ಯಾವುದೇ ಪ್ರಭಾವ, ಅಧಿಕಾರದ ದುರ್ಬಳಕೆ ನಡೆದಿಲ್ಲ. ಮಾಧ್ಯಮದವರು ತಾಂತ್ರಿಕ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು ವರದಿ ಮಾಡಬೇಕು ಎಂದು ಗರಂ ಆಗಿಯೇ ಸಿಎಂ ಪ್ರತಿಕ್ರಿಯಿಸಿದರು.
ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ನೀಡುವಾಗ ತಾಂತ್ರಿಕವಾಗಿ ಸರ್ಕಾರದ ಚುನಾವಣಾ ನೀತಿ ನಿಯಮಗಳ ಪ್ರಕಾರ ಮಾಡುತ್ತಾರೆ. ಯಾವುದೇ ರಾಜ್ಯದಲ್ಲಾಗಲಿ, ಚುನಾವಣಾ ಕ್ಷೇತ್ರದಲ್ಲಾಗಲಿ ಗುರುತು ಹೊಂದಿರುವ ಪಕ್ಷಗಳ ಅಭ್ಯರ್ಥಿಗಳಿಗೆ ಮತಯಂತ್ರಗಳ ಸಾಲಿನಲ್ಲಿ ಕನ್ನಡ ವರ್ಣಮಾಲೆ ಪ್ರಕಾರ ಕ್ರಮಸಂಖ್ಯೆಯನ್ನು ಚುನಾವಣಾ ಆಯೋಗ ನೀಡುತ್ತದೆ. ಮಂಡ್ಯ ಕ್ಷೇತ್ರದಲ್ಲಿ ಗುರುತು ಹೊಂದಿರುವ ಪಕ್ಷಗಳು ಎರಡೇ ಒಂದು ಜೆಡಿಎಸ್ ಮತ್ತು ಮತ್ತೊಂದು ಬಿಎಸ್ ಪಿ. ಹೀಗಾಗಿ ಆ ಪಕ್ಷಗಳ ಅಭ್ಯರ್ಥಿಗಳಿಗೆ ಮೊದಲೆರಡು ಸ್ಥಾನಗಳು ಸಿಕ್ಕಿವೆ. ಇಲ್ಲಿ ಯಾವುದೇ ಪ್ರಭಾವ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿಎಂ, ನಿಖಿಲ್ ನಾಮಪತ್ರ ಅಂಗೀಕರಿಸುವ ಚುನಾವಣಾಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾಮಪತ್ರದಲ್ಲಿ ಯಾವುದೇ ದೋಷವಾಗಿಲ್ಲ. ಚುನಾವಣಾಧಿಕಾರಿಗಳು ನಿಯಮದ ಪ್ರಕಾರವೇ ನಡೆದುಕೊಂಡಿದ್ದಾರೆ. ಒಂದು ವೇಳೆ ತಪ್ಪಾಗಿದ್ದರೆ ಕೋರ್ಟ್​ಗೆ ಹೋಗುವ ಅವಕಾಶವನ್ನು ಅಭ್ಯರ್ಥಿಗಳಿಗೆ ನೀಡಿದ್ದಾರೆ. ಯಾರು ಬೇಕಾದರೂ ಕೋರ್ಟ್​​ನಲ್ಲಿ ಇದನ್ನು ಪ್ರಶ್ನಿಸಬಹುದು ಎಂದು ಸುಮಲತಾಗೆ ಪರೋಕ್ಷ ತಿರುಗೇಟು ನೀಡಿದರು.
SCROLL FOR NEXT