-ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಪರಿಶಿಷ್ಟ ಜಾತಿ ಮೀಸಲು ಲೋಕಸಭೆ ಕ್ಷೇತ್ರ ಗುಲ್ಬರ್ಗ ಈ ಬಾರಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಪುನರಾಯ್ಕೆ ಬಯಸಿ ಅಖಾಡಕ್ಕಿಳಿದು ರಾಷ್ಟ್ರ ಗಮನ ಸೆಳೆದಿದೆ. 1970ರ ದಶಕದಿಂದ ಇಲ್ಲಿಯವರೆಗೂ ತಾವು ಎದುರಿಸಿದ 10 ಚುನಾವಣೆಗಳಲ್ಲಿ (9 ಅಸೆಂಬ್ಲಿ, 1 ಸಂಸತ್ ಚುನಾವಣೆ) ಸತತ ವಿಜಯಲಕ್ಷ್ಮೀ ಒಲಿಸಿಕೊಂಡಿರುವ ಖರ್ಗೆ ಇದೀಗ 11ನೇ ಬಾರಿ ಮತದಾರರ ಮುಂದಿದ್ದಾರೆ.
ಈ ಚುನಾವಣೆ ಸಹಜವಾಗಿಯೇ ಖರ್ಗೆ ರಾಜಕೀಯ ಬದುಕಲ್ಲಿ ಪ್ರತಿಷ್ಠೆ, ಹೆಮ್ಮೆ. ಅಷ್ಟೇ ಅಲ್ಲ ಖರ್ಗೆ ರಾಜಕೀಯ ಪಯಣದ ಕುತೂಹಲಕರ ಘಟ್ಟ. ಹೀಗಾಗಿ ಖರ್ಗೆ ಕದನವಿರುವ ಈ ಅಖಾಡದ ಫಲಿತಾಂಶ ಕುತೂಹಲಕಾರಿ.
ಉರಿ ಬಿಸಿಲು, ಪ್ರಚಾರಕ್ಕೂ ಬಿಡುತ್ತಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ಸೂರ್ಯನ ಪ್ರತಾಪ, ಹೀಗಾಗಿ ಖರ್ಗೆ ಈ ಚುನಾವಣೆಯಲ್ಲಿ ಪ್ರಚಾರಕ್ಕೆ ಬೆಳಗಿನ 8 ಗಂಟೆಗೇ ಮನೆಯಿಂದ ಹೊರಬೀಳುತ್ತಿದ್ದಾರೆ. ನೇರ ನಡೆ- ನುಡಿಯಿಂದಾಗಿಯೇ ಖರ್ಗೆ ಎಲ್ಲರಿಗೂ ಖಡಕ್ಕಾಗಿಯೇ ಕಾಣೋದು.
ಆದರೆ ಲೋಕ ಸಮರದ ಪ್ರಚಾರದಲ್ಲಿ ಖರ್ಗೆ ತಾವು ಮಾತನಾಡಿಸುವ ಮತದಾರರ, ಅದರಲ್ಲೂ ಮಹಿಳೆಯರ ಮುಂದಂತೂ ತುಂಬ ವಿನಮ್ರರಾಗಿ ಮಾತಿಗಿಳಿಯುತ್ತಿದ್ದಾರೆ.
8 ಅಸೆಂಬ್ಲಿ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರದ್ದೇ ಪಾರುಪತ್ಯ. ಈ ಪೈಕಿ 3 ಕ್ಷೇತ್ರಗಳ ಶಾಸಕರು ಸಿದ್ದರಾಮಯ್ಯ ಸಂಪುಟದಲ್ಲಿ (ಖಮರುಲ್ ಇಸ್ಲಾಂ- ಗುಲ್ಬರ್ಗ ಉತ್ತರ, ಡಾ. ಶರಣಪ್ರಕಾಶ- ಸೇಡಂ, ಬಾಬೂರಾವ ಚಿಂಚನ್ಸೂರ್- ಗುರುಮಠಕಲ್) ಸಚಿವರು. ಪ್ರಗತಿ ಯೋಜನೆಗಳನ್ನು ಕ್ಷೇತ್ರಕ್ಕೆ ತಂದವರು ಎಂಬ ಗರಿ ಈಗಾಗಲೇ ಸಿಕ್ಕಿಸಿಕೊಂಡಿರುವ ಖರ್ಗೆಯವರಿಗೆ ಇದಕ್ಕಿಂತ ಅನುಕೂಲಕರ ಸನ್ನಿವೇಶ ಬೇರೋಂದಿಲ್ಲ.
ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಅವರು ಖರ್ಗೆ ಪ್ರಚಾರದಲ್ಲಿ ಸದಾ ಕಾಲ ಸಾಥ್ ನೀಡುತ್ತಿದ್ದಾರೆ. ಖರ್ಗೆ ಎಲ್ಲೇ ಪ್ರಚಾರದಲ್ಲಿರಲಿ ಅಲ್ಲಿಗೆ ಹೋಗಿ ಜನರೊಂದಿಗೆ ಬೆರೆತು ನಾಲ್ಕು ಮಾತನಾಡುತ್ತಿದ್ದಾರೆ. ಸ್ಥಳೀಯವಾಗಿ ಶಾಸಕರು, ಪಾಲಿಕೆ ಸದಸ್ಯರೂ ಪ್ರಚಾರದಲ್ಲಿ ಖರ್ಗೆ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.
ಉರಿಬಿಸಿಲನ್ನೂ ಲೆಕ್ಕಿಸದೆ ಸಾಗಿದೆ ಖರ್ಗೆ ಪ್ರಚಾರ. ಪಾದಯಾತ್ರೆಯಲ್ಲೇ ನಡೆಯುವ ಭಾಷಣದ ಸಭೆಗಳಲ್ಲಿ ಖರ್ಗೆ ಬಿಜೆಪಿಯನ್ನು, ಆ ಪಕ್ಷದ ಪ್ರಧಾನಿಯನ್ನು ಟೀಕಿಸುತ್ತಿದ್ದಾರಾದರೂ ಅದು ಎಂದೂ ಮಿತಿಮೀರಿಲ್ಲ. ಅನ್ಯರನ್ನು ತೆಗಳಿ ಮತ ಕೇಳುವುದಕ್ಕಿಂತ ನಮ್ಮ ಸಾಧನೆ ವಿವರಿಸಿ, ನಮ್ಮ ಪ್ರಗತಿ ನೀಲ ನಕಾಶೆ ತೋರಿಸಿ ಮತ ಕೇಳೋಣ ಎಂಬ ಸಿದ್ಧಾಂತ ಖರ್ಗೆ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ದಿನಚರಿ
ಬೆಳಗ್ಗೆ - ಯೋಗ- ಪ್ರಾಣಾಯಾಮ, ಪತ್ರಿಕೆಗಳನ್ನು ಓದುವುದು- ಮನೆಮಂದಿ ಜೊತೆ ಚರ್ಚೆ, ಬೇಗ ಪ್ರಚಾರಕ್ಕೆ ಹೋಗುತ್ತಿರುವದರಿಂದ ಜೋಳದ ರೊಟ್ಟಿ, ದಾಲ್- ಮೇಂತಿ, ಸಬಸ್ಗಿ ಪಲ್ಲೆ ಊಟ, ನಗರದಲ್ಲಿದ್ದರೆ ಮಧ್ಯಾಹ್ನ ತುಸು ವಿರಾಮ, ಹೊರಗಡೆ ಸಂಚಾರದಲ್ಲಿ ಇದೂ ಇಲ್ಲ, ಸತತ ಪ್ರಚಾರ, ಮಾತುಕತೆ- ಚರ್ಚೆ, ರಾತ್ರಿಯೂ ಜೋಳದ ರೊಟ್ಟಿ ಊಟ