ಗಣೇಶನ ರೂಪ ನಮಗೆಲ್ಲ ಚೆನ್ನಾಗಿ ಗೊತ್ತಿದೆ. ಆನೆಯ ಮುಖ (ಗಜವದನ), ಮೊರದಂತಹ ಕಿವಿಗಳು (ಶೂರ್ಪಕರ್ಣ ), ದೊಡ್ಡ ಹೊಟ್ಟೆ (ಲಂಬೋದರ), ಮೂರು ಕೈಗಳಲ್ಲಿ ಪಾಶ, ಅಂಕುಶ ಮತ್ತು ಮೋದಕ, ನಾಲ್ಕನೆಯ ಕೈ ಭಕ್ತನಿಗೆ ‘ಹೆದರಬೇಡ’ ಎಂದು ಅಭಯ ಹಸ್ತ ಸೂಚಿಸುತ್ತದೆ (ಚತುರ್ಭುಜ), ಕೆಂಪುಬಣ್ಣದ ಸುಂದರ ದೇಹ; ಇದೇ ಗಣೇಶನ ಆಕೃತಿ. ಇಲಿ ಇವನ ವಾಹನ.
ಗಣಪತಿಯನ್ನು ಪಾರ್ವತಿಯು ತನ್ನ ಮೈ ಮಣ್ಣಿನಿಂದ ಮಾಡಿದಳು ಎಂಬ ಕಥೆ ಇದೆ. ಗಣೇಶನ ಹಬ್ಬದಂದು ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಪೂಜಿಸುತ್ತೇವೆ. ಇದು ಗಣೇಶನಿಗೆ ಮಣ್ಣಿನ ಸಂಬಂಧವಿದೆ ಎಂದು ತೋರಿಸುತ್ತದೆ.
ಗಜಮುಖ: ಗಣಪತಿಯ ದೊಡ್ಡ ತಲೆ, ಅವನು ಮಹಾ ಬುದ್ಧಿಶಾಲಿ ಎಂಬುದನ್ನು ಸೂಚಿಸುತ್ತದೆ. ಆನೆಯು ಜ್ಞಾನಶಕ್ತಿ ಮತ್ತು ಕರ್ಮಶಕ್ತಿ ಎರಡನ್ನೂ ಪ್ರತಿನಿಧಿಸುತ್ತದೆ. ಆನೆಯ ಪ್ರಮುಖ ಗುಣಗಳೆಂದರೆ ವಿವೇಕ ಮತ್ತು ನಿರಾಯಾಸತ್ವ. ಆನೆಯ ಬೃಹತ್ತಾದ ತಲೆಯು ವಿವೇಕ ಮತ್ತು ಜ್ಞಾನವನ್ನು ಸೂಚಿಸುತ್ತದೆ. ಆನೆಗಳು ತಡೆಗಳ ಸುತ್ತ ಬಳಸಿ ನಡೆಯುವುದಿಲ್ಲ, ಅಲ್ಲದೇ ತಡೆಗಳಿಂದ ನಿಲ್ಲಿಸಲ್ಪಡುವುದೂ ಇಲ್ಲ. ಮತ್ತೆ ಗಂಭೀರತೆಯನ್ನು ಸೂಚಿಸುತ್ತದೆ. ನಾವು ಭಗವಾನ್ ಗಣೇಶನನ್ನು ಪೂಜಿಸಿದಾಗ ನಮ್ಮೊಳಗಿರುವ ಈ ಗಜಗುಣಗಳು ಬೆಳಗಿ ನಾವು ಈ ಗುಣಗಳ ಪ್ರಯೋಜನ ಪಡೆಯುತ್ತೇವೆ.
ವಿನಾಯಕನ ಕಿವಿಗಳು ಮೊರಗಳಂತೆ ಅಗಲವಾಗಿವೆ. ಮೊರದಲ್ಲಿ ಧಾನ್ಯವನ್ನು ಕೇರುತ್ತಾರೆ, ಇದರಿಂದ ಹೊಟ್ಟು, ಕಾಳು ಬೇರೆ ಬೇರೆ ಆಗುತ್ತವೆ. ಹಾಗೆಯೇ ಗಣೇಶನು ಸತ್ಯವನ್ನೂ ಸುಳ್ಳನ್ನು ಬೇರೆಬೇರೆ ಮಾಡುತ್ತಾನೆ. ಈ ಅಗಲವಾದ ಕಿವಿಗಳು ಭಕ್ತರ ಪ್ರಾರ್ಥನೆಗಳನ್ನು ಗಮನವಿಟ್ಟು ಕೇಳುತ್ತಾನೆ ಎಂಬುದನ್ನು ತೋರಿಸುತ್ತವೆ. ಯಾವಾಗಲೂ ಆಡುವ ಅವನ ಸೊಂಡಿಲು ಸದಾ ಕ್ರಿಯಾಶೀಲನಾಗಿರು ಎಂದು ಬೋಧಿಸಿದರೆ, ಏಕದಂತ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ಸೂಚಿಸುತ್ತದೆ.
ಗಣೇಶನಿಗೆ ನಾಲ್ಕು ಕೈಗಳಿವೆ. ಅವನ ಬಲ ಭಾಗದ ಎರಡು ಕೈಗಳಲ್ಲಿ ಒಂದರಲ್ಲಿ ಪಾಶವಿದೆ. ಇದು ಮಹಿಮೆಯಿಂದ ಕೂಡಿದ ಪಾಶ. ಗಣೇಶ ಇದರ ಸಹಾಯದಿಂದ ತನ್ನ ಭಕ್ತರ ಮನಸ್ಸನ್ನು ಆಕರ್ಷಿಸುತ್ತಾನೆ. ಇನ್ನೊಂದು ವರದಹಸ್ತ. ಇದು ಗಣೇಶನನ್ನು ಮೊರೆ ಹೊಕ್ಕವರಿಗೆ ಭಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಹೀಗೆಯೇ ಎಡಭಾಗದ ಎರಡು ಕೈಗಳಲ್ಲಿ ಒಂದು ಅಂಕುಶವನ್ನು ಹಿಡಿದಿದೆ. ಇದು ನಮ್ಮ ಅಜ್ಞಾನವನ್ನು ನಿವಾರಿಸುವ ಸಂಕೇತ. ಮತ್ತೊಂದು ಕೈಯಲ್ಲಿ ಮೋದಕಗಳಿಂದ ತುಂಬಿದ ಪಾತ್ರೆಯಿದೆ. ಇದು ಗಣೇಶನು ಎಲ್ಲರಿಗೂ ಸಂತೋಷವನ್ನು ಕೊಡುತ್ತಾನೆ ಎಂದು ತೋರಿಸುತ್ತದೆ. ಮತ್ತು ಅವನ ಹೊರಮುಖವಾಗಿರುವ ಕೆಳಗಿನ ಕೈಯು ನಿರಂತರವಾದ ಕೊಡುಗೆಯ ಸಂಕೇತ ಮತ್ತು ಶಿರ ಬಾಗಿಸಲು ಆಹ್ವಾನ ಕೂಡ. ಇದು ನಾವೆಲ್ಲರೂ ಒಂದು ದಿನ ಈ ಭೂಮಿಯಲ್ಲಿ ಲೀನವಾಗುತ್ತೇವೆಂಬ ಸಂಗತಿಯ ಚಿಹ್ನೆ.
ಗಣೇಶನ ದೊಡ್ಡ ಹೊಟ್ಟೆಯು ಔದಾರ್ಯವನ್ನು ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತವೆ. ಹೊಟ್ಟೆಯು ಇಡೀ ಬ್ರಹ್ಮಾಂಡವೇ ಗಣಪತಿಯಲ್ಲಿ ಅಡಗಿದೆ ಎಂಬ ಅರ್ಥವನ್ನು ಕೊಡುತ್ತದೆ. ಗಣೇಶನ ಮೇಲ್ ಮುಖವಾಗಿರುವ ಕೈ ಅಭಯಹಸ್ತದ ಸಂಕೇತವಾಗಿದ್ದು, ’ಹೆದರದಿರು, ನಾನು ನಿನ್ನ ಜೊತೆಗಿದ್ದೇನೆ’ ಎಂದು ಅರ್ಥ ನೀಡುತ್ತದೆ. ಅವನು ತನ್ನ ಕೈಗಳಲ್ಲಿ ಅಂಕುಶ ಮತ್ತು ಪಾಶವನ್ನು ಹಿಡಿದಿದ್ದಾನೆ. ಸ್ವ- ಜಾಗೃತಿಯಿಂದ ಬಹಳ ಶಕ್ತಿಯು ಹೊರಹುಮ್ಮುವುದು, ಇದರ ನಿಯಂತ್ರಣವಿಲ್ಲದಿದ್ದಲ್ಲಿ ಆ ಶಕ್ತಿಯು ಕಗ್ಗಂಟಾಗುವುದು.
ಗಣೇಶನು ಅಷ್ಟು ಚಿಕ್ಕದಾದ ಇಲಿಯ ಮೇಲೆ ಕುಳಿತು ಏಕೆ ಸಂಚರಿಸುತ್ತಾನೆ? ಕೋಪ, ಅಹಂಕಾರ, ತನಗೇ ಎಲ್ಲ ಬೇಕು ಎಂಬ ಸ್ವಾರ್ಥ – ಇಂತಹ ಕೆಟ್ಟ ಗುಣಗಳನ್ನು ಇಲಿ ಸೂಚಿಸುತ್ತದೆ. ಈ ಕೆಟ್ಟ ಗುಣಗಳನ್ನು ಗಣಪತಿ ತಡೆದಿಡುತ್ತಾನೆ ಎಂದು ಇಲಿಯನ್ನು ಸವಾರಿ ಮಾಡುವುದು ತೋರಿಸುತ್ತದೆ.