ಆರೋಗ್ಯ-ಜೀವನಶೈಲಿ

ಸಿಗರೆಟ್ ಗಿಂತಲೂ ಹಾನಿಕಾರಕ ಅಗರಬತ್ತಿಯ ಧೂಪ: ಹೊಸ ಅಧ್ಯಯನ

Guruprasad Narayana
ಹೈದರಾಬಾದ್: ಮನೆಯಲ್ಲಿ ಪೂಜಾಸಂದರ್ಭದಲ್ಲಿ ಸಾಮಾನ್ಯವಾಗಿ ಬಳಸುವ ಊದುಬತ್ತಿ-ಕರ್ಪೂರ-ಸಾಂಬ್ರಾಣಿ ಹೊಗೆಯಲ್ಲಿ ಸಿಗೆರೆಟ್ ಹೊಗೆಗಿಂತಲೂ ಹೆಚ್ಚಿನ ಹಾನಿಕಾರಕ ಕಣಗಳಿದ್ದು ಕ್ಯಾನ್ಸರ್ ಒಳಗೊಂಡಂತೆ ಹಲವಾರು ರೋಗಗಳಿಗೆ ಕಾರಣವಾಗುತ್ತದೆ ಎಂದಿದೆ ಹೊಸ ಅಧ್ಯಯನವೊಂದು. 
ಭಾರತ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಊದುಬತ್ತಿ, ಕರ್ಪೂರ ಇತ್ಯಾದಿಗಳನ್ನು ಉರಿಸುವುದು ಸರ್ವೇ ಸಾಮಾನ್ಯ. 
ಇತ್ತೀಚೆಗೆ ಇವುಗಳನ್ನು ಧಾರ್ಮಿಕ ಪೂಜಾ ವಿಧಿಗಳಿಗೆ ಅಲ್ಲದೆ ಸುವಾಸನೆಗಾಗಿಯೂ ಉರಿಸಲಾಗುತ್ತದೆ. ಇವು ಸುಡುವ ವೇಳೆಯಲ್ಲಿ ಹಾನಿಕಾರಕ ಕಣಗಳು ಗಾಳಿಗೆ ಸೇರಲ್ಪಡುತ್ತವೆ. 
"ಒಳಾಂಗಣಗಳಲ್ಲಿ ಇವುಗಳನ್ನು ಉರಿಸುವಾಗ ಇದರಿಂದಾಗುವ ಅನಾರೋಗ್ಯಕರ ತೊಂದರೆಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ನಿರ್ವಹಣೆ ಅಗತ್ಯವಿದೆ" ಎಂದು ಚೈನಾದ ಗೌಂಗ್ಜೌ ತಾಂತ್ರಿಕ ವಿಶ್ವವಿದ್ಯಾಲಯದ ರಾಂಗ್ ಜೌ ತಿಳಿಸಿದ್ದಾರೆ. 
ಇದೇ ಮೊದಲ ಬಾರಿಗೆ ಒಳಾಂಗಣ ಪ್ರದೇಶಗಳಲ್ಲಿ ಈ ಪೂಜಾ ಸಾಮಗ್ರಿಗಳನ್ನು ಉರಿಸುವುದರಿಂದ ಉಂಟಾಗುವ ಅನಾರೋಗ್ಯದ ಸಾಧ್ಯತೆಯನ್ನು ಸಿಗರೆಟ್ ನಿಂದ ಉಂಟಾಗುವ ಹಾನಿಗಳ ಬಗ್ಗೆ ಉಳ್ಳ ಸಂಶೋಧನೆಗೆ ತುಲನೆ ಮಾಡಿ ನೋಡಿದ್ದಾರೆ ಸಂಶೋಧಕರು. ಅಗರ ಮತ್ತು ಶ್ರೀಗಂಧ ಸುವಾಸನೆಯುಳ್ಳ ಊದುಬತ್ತಿಯಿಂದ ಬರುವ ಹೊಗೆಯಿಂದ ಆಗುವ ಹಾನಿಕಾರಕ ಪರಿಣಾಮಗಳನ್ನು ಪ್ರಾಣಿಗಳ ಮೇಲೆ ಈ ಸಂಶೋಧಕರು ಪರೀಕ್ಷಿಸಿದ್ದಾರೆ.
ಈ ಹೊಗೆಗಳು ಸಿಗರೆಟ್ ಹೊಗೆಗಿಂತಲೂ ಹೆಚ್ಚು ಸೈಟೋಟಾಕ್ಸಿಕ್ ಮತ್ತು ಜೆನೋಟಾಕ್ಸಿಕ್ ಎಂದು ತಿಳಿಸಿದ್ದಾರೆ. ಅಂದರೆ ಇವುಗಳು ಕ್ಯಾನ್ಸರ್ ರೋಗವನ್ನು ತರಬಲ್ಲ ಗುಣ ಹೊಂದಿದೆ ಎಂದು ತಿಳಿದುಬಂದಿದೆ. 
ಈ ಅಧ್ಯಯನ ಸ್ಪ್ರಿಂಗರ್ಸ್ ಜರ್ನಲ್ ಫಾರ್ ಎನ್ವಿರಾನಮೆಂಟಲ್ ಕೆಮಿಸ್ಟ್ರಿ ಲೆಟರ್ಸ್ ನಲ್ಲಿ ಪ್ರಕಟವಾಗಿದೆ. 
SCROLL FOR NEXT