ಹುಬ್ಬಳ್ಳಿ: ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದಾಗಿ ನೀರಿನ ಅಭಾವ ಹೆಚ್ಚಾಗಿದ್ದು, ರಾಜ್ಯದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೆಲವು ಪ್ರಮುಖ ನಗರಗಳಲ್ಲಿ ವಾರಕ್ಕೆ, ಎರಡು ವಾರಕ್ಕೆ ಒಂದು ಬಾರಿಯಾದರೂ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಈ ಅವಳಿ ನಗರಗಳಿಗೆ ಮಾತ್ರ ತಿಂಗಳಿಗೆ ಒಂದು ಬಾರಿ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ.
ತಿಂಗಳಿಗೆ ಒಂದು ಬಾರಿ ಸಂಬಳದಂತೆ ಈ ಅವಳಿ ನಗರದಲ್ಲಿ ತಿಂಗಳಿಗೇ ಒಂದು ಬಾರಿಯೇ ನೀರು ಪೂರೈಕೆಯಾಗುವುದು. ಗದಗ ಮತ್ತು ಬೆಟಗೆರಿಯೇ ಆ ಅವಳಿ ನಗರಗಳು. 25 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ. ನೀರನ್ನು ಸಂಗ್ರಹಿಸಲು ಜನರು ಬಿಂದಿಗೆ, ಬಕೆಟ್ ಗಳನ್ನು ಸಾಲು ಸಾಲಾಗಿ ನೀರು ಸಂಗ್ರಹಿಸುತ್ತಾರೆ. ಆದರೆ, ತಿಂಗಳಿಗೊಮ್ಮೆ ಸಿಗುವ ನೀರಿನಿಂದ ಹೇಗೆ ತಾನೆ ಜೀವನ ಸಾಗಿಸಲು ಸಾಧ್ಯ. ಇಲ್ಲಿನ ನಿವಾಸಿಗಳು ನೀರಿನ ಒಂದು ತೊಟ್ಟನ್ನು ವ್ಯರ್ಥ ಮಾಡುವುದಿಲ್ಲ. ಗದಗಿನಲ್ಲಿ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರವಲ್ಲದೇ ಇತರೆ ಕಾಲದಲ್ಲೂ ನೀರಿನ ಕೊರತೆ ಇದೆ.
ಗದಗಿನಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದ ವೇಳೆ, ಹೆಮ್ಮಿಗಿ ಜಲಾಶಯವನ್ನು ನಿರ್ಮಿಸಲಾಯಿತು. ಆದರೆ, ಈಗ ಗದಗಿನಲ್ಲಿ 2 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹೆಮ್ಮಿಗಿ ಜಲಾಶಯದಿಂದ ಗದಗಿಗೆ ಪೈಪ್ ಗಳ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪೈಪ್ ಹಾದು ಹೋಗಿರುವ ಸ್ಥಳದಲ್ಲಿ ಸುಮಾರು 17 ಹಳ್ಳಿಗಳಿವೆ. ಅಲ್ಲಿನ ಜನರು ಪೈಪ್ ಗಳನ್ನು ಒಡೆದು, ನೀರು ಸಂಗ್ರಹಿಸುತ್ತಿದ್ದಾರೆ. ಇನ್ನು ಕೆಲವು ಕಡೆ ನೀರು ಸೋರಿಕೆಯಾಗುತ್ತಿದೆ. ಇದರಿಂದಾಗಿ ಗದಗ ಮತ್ತು ಬೆಟಗಿರಿ ಜನಕ್ಕೆ ನೀರಿಲ್ಲದಂತಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos