ಬೆಂಗಳೂರು: ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಕರ್ನಾಟಕದಲ್ಲಿ 9,468 ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ ಕೂಡ ಸರ್ಕಾರದ ಸ್ವಾಯತ್ತ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಇದನ್ನು ಸುಳ್ಳು ಎಂದು ಸಾಬೀತುಪಡಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ಸಮೀಕ್ಷೆಯಲ್ಲಿ, ನಮ್ಮ ರಾಜ್ಯದಲ್ಲಿ ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ 1.61 ಲಕ್ಷವಿದೆ. ಕಳೆದ ಜನವರಿಯಲ್ಲಿ ಸರ್ವಶಿಕ್ಷ ಅಭಿಯಾನ ನಡೆಸಿದ್ದ ಸಮೀಕ್ಷೆಯಲ್ಲಿ 9,000 ಮಕ್ಕಳು ಎಂದು ಹೇಳಲಾಗಿತ್ತು. ಆದರೆ ಇದೀಗ ಆಯೋಗ ನಡೆಸಿರುವ ಸಮೀಕ್ಷೆಯಲ್ಲಿ ಅದು 20 ಪಟ್ಟು ಹೆಚ್ಚಾಗಿದೆ.
ಇತ್ತೇಚೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವದೇಕರ್ ಲೋಕಸಭೆಯಲ್ಲಿ ಹೇಳಿಕೆ ನೀಡಿ, ಕರ್ನಾಟಕದಲ್ಲಿ 1.22 ಲಕ್ಷ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿದ್ದಾರೆ ಎಂದಿದ್ದರು. ಈ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸರ್ವ ಶಿಕ್ಷಾ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಸಿ.ಪಿ.ಜಾಫರ್, ನಮ್ಮ ಮೊದಲ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 1.20 ಲಕ್ಷ ಮಂದಿ ಮಕ್ಕಳು ಶಾಲೆಗೆ ಹೋಗದೆ ಉಳಿದಿದ್ದಾರೆ ಎಂದು ತಿಳಿದುಬಂದಿತ್ತು. ನಂತರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಜನವರಿ 2016ರಲ್ಲಿ ಮರು ಸಮೀಕ್ಷೆ ನಡೆಸಿದಾಗ ಶಾಲೆಗೆ ಹೋಗದಿರುವ ಮಕ್ಕಳ ಸಂಖ್ಯೆ 9,000 ಕಂಡುಬಂತು ಎಂದಿದ್ದಾರೆ.
ಆದರೆ ಮಕ್ಕಳ ಹಕ್ಕು ಆಯೋಗ 'ಶಾಲೆ ಕಡೆಗೆ, ನನ್ನ ನಡಿಗೆ' ಯೋಜನೆಯಡಿ ನಡೆಸಿದ ಸಮೀಕ್ಷೆ ಇತ್ತೀಚಿನದ್ದಾಗಿದೆ. ಇದರ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಮೀಕ್ಷೆಯ ವರದಿ ಸಿಕ್ಕಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಆಯೋಗದ ಉನ್ನತಾಧಿಕಾರಿಯೊಬ್ಬರು, ರಾಜ್ಯಾದ್ಯಂತ ಇರುವ ಮಕ್ಕಳು ಮತ್ತು ಪೋಷಕರ ಸಂಪರ್ಕ ಪಡೆದು ನಾವು ಸಮೀಕ್ಷೆ ನಡೆಸಿದ್ದೇವೆ. ವರದಿಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos