ರಾಜ್ಯ

2 ವರ್ಷಗಳಲ್ಲೇ ಕನಿಷ್ಠ ದರಕ್ಕಿಳಿದ ತೊಗರಿಬೇಳೆ!

Srinivasamurthy VN

ಬೆಂಗಳೂರು: ಗಗನದತ್ತ ಮುಖ ಮಾಡಿದ್ದ ತೊಗರಿ ಬೇಳೆ ದರ ಕಳೆದ 2 ವರ್ಷಗಳಲ್ಲೇ ಕನಿಷ್ಠ ದರಕ್ಕಿಳಿದಿದ್ದು, ಕಳೆದೆರಡು ವಾರಗಳಿಂದಲೂ ತೊಗರಿ ಸೇರಿದಂತೆ ಪ್ರಮುಖ ಧಾನ್ಯಗಳ ಬೆಲೆಯಲ್ಲಿ ಕ್ರಮೇಣ ಕುಸಿತಕಂಡುಬರುತ್ತಿದೆ.

ಪ್ರಮುಖವಾಗಿ ನೋಟು ನಿಷೇಧದ ಬಳಿಕ ಅಂದರೆ ಕಳೆದ ನವೆಂಬರ್ 10ರಿಂದಲೇ ಬೇಳೆಕಾಳುಗಳ ಬೆಲೆಯಲ್ಲಿ ಕುಸಿತ ಕಂಡುಬರುತ್ತಿದ್ದು, ತೊಗರಿ ತವರು ಎಂದೇ ಖ್ಯಾತವಾದ ಕರ್ನಾಟಕದ ಕಲಬುರ್ಗಿಯಲ್ಲೇ ತೊಗರಿ ಕನಿಷ್ಠ ದರಕ್ಕೆ  ಕುಸಿದಿದೆ. ಅಂತೆಯೇ ಮೈಸೂರು ಬೆಳೆದರದಲ್ಲಿ ಕಳೆದೊಂದು ವಾರದಿಂದ ಗಣನೀಯ ಪ್ರಮಾಣದ ಕುಸಿತಕಂಡುಬಂದಿದೆ ಎಂದು ಬಳ್ಳಾರಿ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಕಲಬುರ್ಗಿ ಎಂಪಿಎಂಸಿ ಮಾರುಕಟ್ಟೆ  ಅಧಿಕಾರಿಗಳು ತಿಳಿಸಿರುವಂತೆ ಪ್ರಸ್ತುತ ಪ್ರತೀ ಕ್ವಿಂಟಾಲ್ ತೊಗರಿ ಬೇಳೆ 5, 113 ರುಗಳಿಗೆ ಮಾರಾಟವಾಗುತ್ತಿದ್ದು, ಡಿಸೆಂಬರ್ 1 ರಂದು 5,454 ರುಗಳಿತ್ತು. ಆದರೆ ಡಿಸೆಂಬರ್ 2ರಂದು 5,331ರು.ಗೆ ಕುಸಿದ ದರ ಡಿಸೆಂಬರ್  14ರಹೊತ್ತಿಗೆ 5,113ರುಗೆ ಕುಸಿದಿದೆ. ಮುಂದಿನ ದಿನಗಳಲ್ಲಿ ಈ ದರ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪ್ರಸ್ತುತ ತೊಗರಿ ಬೇಳೆ ದರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ 5,050ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದು, ದರ ಇಳಿಕೆ ಹೀಗೆಯೇ ಮುಂದುವರೆದರೆ ಖಂಡಿತಾ ಸರ್ಕಾರದ ಕನಿಷ್ಠ ಬೆಲೆಗಿಂತಲೂ ಕಡಿಮೆ ದರಕ್ಕೆ ಕುಸಿಯುವ  ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ದರ ಕುಸಿತವನ್ನು ತಡೆಯಬೇಕು ಎಂದು ರೈತಪರ ಮುಖಂಡರು ಆಗ್ರಹಿಸಿದ್ದಾರೆ.

ಇನ್ನು ಮೈಸೂರು ಬೇಳೆ ದರದಲ್ಲಿಯೂ ಕೂಡ ಗಣನೀಯ ಇಳಿಕೆ ಕಂಡುಬರುತ್ತಿದ್ದು, ಬುಧವಾರ ಪ್ರತೀ ಕ್ವಿಂಟಾಲ್ ಗೆ ಕನಿಷ್ಠ3,808ರಿಂದ ಗರಿಷ್ಠ 4,555 ರು.ಗೆ ಮಾರಾಟವಾಗಿತ್ತು. ಇನ್ನು ಮೈಸೂರು ಬೆಳೆ ದರ ಕುಸಿತಕ್ಕೆ ಹೆಚ್ಚಾದ  ಆಮದು ಕಾರಣವೆಂದು ಎಪಿಎಂಸಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT