ರಾಜ್ಯ

ಉದ್ಯಮಿ ಪರಚೂರಿ ಸುರೇಂದ್ರ ಕುಮಾರ್ ಹತ್ಯೆ ಪ್ರಕರಣ: 45 ದಿನ ಕಳೆದರೂ ಸಿಕ್ಕಿಲ್ಲ ಸಣ್ಣ ಸುಳಿವು

Shilpa D

ಬೆಂಗಳೂರು: ಉದ್ಯಮಿ ಪರಚೂರಿ ಸುರೇಂದ್ರ ಕುಮಾರ್ ಹತ್ಯೆ ನಡೆದು 45 ದಿನ ಕಳೆದರೂ ಸಂಜಯನಗರ ಪೊಲೀಸರಿಗೆ ಇದುವರೆಗೂ ಕೊಲೆ ಮಾಡಿದವರ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.

ಅಕ್ಟೋಬರ್ 30 ರಂದು  ದೀಪಾವಳಿ ಹಬ್ಬದಂದು ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರುವ ಪರಚೂರಿ ಸುರೇಂದ್ರ ಕುಮಾರ್ ಮನೆ ಮುಂದೆಯೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ಸುರೇಂದ್ರ  ಮನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆರು ಸುತ್ತು ಗುಂಡು ಹಾರಿಸಿ ಆರೋಪಿಸುರೇಂದ್ರ ಅವರನ್ನು ಕೊಂದಿದ್ದಾನೆ. ಆದರೆ ಆರೋಪಿ ಬಗ್ಗೆ ಇದುವರೆಗೂ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ನಾವು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಅವರ ಕಚೇರಿಯ ಕೆಲ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಯಿತು. ಗುಪ್ತಚರ ಇಲಾಖೆಯ ಕೆಲ ಅಧಿಕಾರಿಗಳು ಪಕ್ಕದ ರಾಜ್ಯಗಳಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ, ಆದರೆ ಅಲ್ಲಿಯೂ ಕೂಡ ಅವರಿಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಹೈದರಾಬಾದ್ , ಉತ್ತರ ಪ್ರದೇಶ ಮತ್ತು ದೆಹಲಿಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿತ್ತು. ಕಪಿಲ್ ಸರಸ್ವತ್ ನನ್ನು ವಿಚಾರಣೆ ನಡೆಸಲಾಗಿದೆ. ಕಪಿಲ್ ಸರಸ್ವತ್ ಜೊತೆ ಸುರೇಂದ್ರಗೆ ಹಣಕಾಸು ವಿವಾದವಿತ್ತು. ಹೀಗಾಗಿ ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಅಲ್ಲಿಯೂ ಸಹ ಯಾವುದೇ ಮಾಹಿತಿ ಸಿಕ್ಕಿಲ್ಲ . ಈ ಪ್ರಕರಣ ಬೇಧಿಸಲು ಮತ್ತಷ್ಟು ಹೆಚ್ಚಿನ ಸಮಯ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT