ರಾಜ್ಯ

ಪಂಚಾಯಿತಿ ಸಮರ: ಸೋತು ಮುಖಭಂಗಕ್ಕೀಡಾದ ಪ್ರಮುಖರು

Srinivasamurthy VN

ಬೆಂಗಳೂರು: ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ, ಮತದಾರರ ಒಲಿಸಿಕೊಳ್ಳುವಲ್ಲಿ ವಿಫಲರಾದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದ್ದು, ಈ ಬಾರಿಯ ಪಂಚಾಯ್ತಿ  ಚುನಾವಣೆಯಲ್ಲಿಯೂ ಘಟಾನುಘಟಿ ನಾಯಕರು ಮತ್ತು ಅವರ ಸಂಬಂಧಿಕರು ಸೋಲೊಪ್ಪಿಕೊಂಡಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಬಾಗೂರು ಜಿ.ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಶಾಸಕ ಬಾಲಕೃಷ್ಣ ಪತ್ನಿ ಕುಸುಮಾ ಅವರು ಸೋಲು ಕಂಡಿದ್ದು, ಗುಬ್ಬಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ  ಜೆಡಿಎಸ್ ಶಾಸಕ ಶ್ರೀನಿವಾಸ್ ಪತ್ನಿ ಕೂಡ ಸೋತಿದ್ದಾರೆ.

ಉಳಿದಂತೆ ಸಿಂಗನಾಯಕನಹಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪತ್ನಿ ವಾಣಿಶ್ರೀ ವಿಶ್ವನಾಥ್` ಸೋತಿದ್ದು,  ಈ ಹಿಂದೆ ಬಿಬಿಎಂಪಿ  ಚುನಾವಣೆಯಲ್ಲೂ ಸೋಲು ಕಂಡಿದ್ದ ವಾಣಿಶ್ರೀ ಇಲ್ಲೂ ಸೋಲಿನ ಕಹಿಯುಂಡಿದ್ದಾರೆ. ಇನ್ನು ಪ್ರತಿಷ್ಠೆಯ ಕಣವಾಗಿದ್ದ  ಕೋಲಾರ ಜಿಲ್ಲೆ ಪಾರಂಡಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ  ಕೋಲಾರ  ಸಂಸದ ಕೆ.ಎಚ್​​.ಮುನಿಯಪ್ಪ ಪುತ್ರಿ ರೂಪಾ ಕೂಡ ಹೀನಾಯವಾಗಿ ಸೋಲು ಕಂಡಿದ್ದಾರೆ.

ಕಲಬುರಗಿಯಲ್ಲಿ ಮಾಜಿ ಸಿಎಂ ಧರಂಸಿಂಗ್`ಗೆ ಮತ್ತೆ ಮುಖಭಂಗವಾಗಿದ್ದು, ಖಣದಾಳ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧರ್ಮಸಿಂಗ್ ಅಣ್ಣನ ಮಗ ಸಂಜಯ್ ಸಿಂಗ್  ಸೋಲುಂಡಿದ್ದಾರೆ. ಯಾದಗಿರಿಯ ಹುಣಸಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕನ ಪುತ್ರ ವೇಣುಗೋಪಾಲ ನಾಯಕ್ ಅವರನ್ನು ಸೋಲು  ಹಿಂಬಾಲಿಸಿದೆ. ದಾವಣಗೆರೆ ಜಿಲ್ಲೆ ಕಂಚಿಕೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಪುತ್ರ ಭರತ್ ನಾಯ್ಕ್ ಅವರು ಸೋತಿದ್ದಾರೆ.

SCROLL FOR NEXT