ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಬಾಲ್ಯ ಸ್ನೇಹಿತನನ್ನೆ ಹತ್ಯೆಮಾಡಿದ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ನಡೆದಿದೆ.
ಕಳೆದ ಈ ಸೋಮವಾರ ಈ ಕೊಲೆ ನಡೆದಿದ್ದು, ವಿಲ್ಸನ್ ಗಾರ್ಡನ್ ನ ಸ್ಮಶಾನದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ 22 ವರ್ಷದ ಯುವಕನ ಮೃತದೇಹವನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಲೆಯಾದ ಯುವಕ ವಿನಾಯಕನಗರದ ಶರತ್ ಎಂದು ಗುರುತಿಸಲಾಗಿದ್ದು, ಪೇಂಟರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಕೊಲೆ ಆರೋಪಿ ದೀಪು ಲಾಲ್ ಬಾಗ್ ನಲ್ಲಿ ಟೀ ಮಾರುತ್ತಿದ್ದ ಎನ್ನಲಾಗಿದೆ.
ಶರತ್ ಮತ್ತು ದೀಪು ಇಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವರ್ಷಗಳ ಹಿಂದೆ ದೀಪುಗೆ ಮದುವೆಯಾಗಿತ್ತು. ಕಳೆದ ಕೆಲವು ದಿನಗಳಿಂದ ದೀಪು ಕೆಲಸಕ್ಕೆ ತೆರಳಿದ ನಂತರ ಶರತ್ ತನಗೆ ಪೀಡಿಸುತ್ತಿದ್ದ ಎಂದು ಪತ್ನಿ ಪತಿಗೆ ಹೇಳಿದ್ದಾಳೆ. ಈ ಸಂಬಂಧ ದೀಪು ಶರತ್ ಗೆ ತನ್ನ ಪತ್ನಿಯಿಂದ ದೂರವಿರುವಂತೆ ಎಚ್ಚರಿಕೆ ಸಹ ನೀಡಿದ್ದ ಎನ್ನಲಾಗಿದೆ. ಆದರೂ ಸ್ನೇಹಿತನ ಪತ್ನಿಗೆ ಪೀಡಿಸುವುದನ್ನು ಶರತ್ ನಿಲ್ಲಿಸಿರಲಿಲ್ಲ. ಹೀಗಾಗಿ ದೀಪು ಕೊಲೆಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಸೋಮವಾರ ಶರತ್ ನನ್ನು ಬಾರ್ ಗೆ ಕರೆದುಕೊಂಡು ಹೋಗಿ ಕಂಟಪೂರ್ತಿ ಕುಡಿಸಿ, ಬಳಿಕ ಸ್ಮಶಾನಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ.