ಬೆಂಗಳೂರು: ಯುವತಿಯೊಬ್ಬಳು ತನ್ನ ಪ್ರಿಯಕರನ ಮನೆಯಲ್ಲೇ ನಿಗೂಢವಾಗಿ ಆತ್ಮಹತ್ಯೆ ಶರಣಾಗಿದ್ದು, ಬಳಿಕ ಆಕೆಯ ಪ್ರಿಯಕರ ಸಹ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಾಡುಗೋಡಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ 22 ವರ್ಷದಾ ಸುನಂದಾ ಎಂಬಾಕೆ ನಿಗೂಢವಾಗಿ ಸಾವನ್ನಪ್ಪಿದ್ದು, ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯವತಿಯ ಶವ ಪತ್ತೆಯಾಗಿದೆ.
ಖಾಸಗಿ ಕಾಲೇಜ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸುನಂದಾ ನಿನ್ನೆ ರಾತ್ರಿಯೇ ಪ್ರಿಯಕರ ಸೈದ್ರಾ ಎಂಬಾತನ ಮನೆಗೆ ಆತನ ಹುಟ್ಟುಹಬ್ಬ ಆಚರಣೆಗಾಗಿ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಭಾರೀ ಜಗಳವಾಗಿದೆ ಎಂದು ಹೇಳಲಾಗಿದ್ದು, ಜಗಳದ ಬಳಿಕ ಸುನಂದಾ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಕೇಳಿಕೊಂಡಿದ್ದಾಳೆ. ಆದರೆ ತಂದೆ ಮತ್ತು ಸಹೋದರ ಬರುವಷ್ಟರಲ್ಲೇ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಸುನಂದಾ ಸೈದ್ರಾ ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ ವಿವಾಹವೂ ನಿಶ್ಚಯ ಮಾಡಿದ್ದರು ಎನ್ನಲಾಗಿದೆ.
ಈ ಸಂಬಂಧ ಸುನಂದಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಗಳನ್ನು ಸೈದ್ರಾ ಕೊಲೆ ಮಾಡಿದ್ದಾನೆ, ಆತ್ಮಹತ್ಯೆಯಲ್ಲ ಎಂದು ಆರೋಪಿಸಿದ್ದಾರೆ.
ಘಟನೆಯ ನಂತರ ತಲೆ ಮರೆಸಿಕೊಂಡಿರುವ ಸೈದ್ರಾ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.