ರಾಜ್ಯ

ಭಾಸ್ಕರರಾವ್ ವಿಚಾರಣೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್

Shilpa D

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ನ್ಯಾಯಮೂರ್ತಿ ಭಾಸ್ಕರರಾವ್‌ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಲು ರಾಜ್ಯಪಾಲ ವಜುಭಾಯಿ ವಾಲಾ ಅನುಮತಿ ನೀಡಿದ್ದಾರೆ.

ವಿಚಾರಣೆಗೆ ಅನುಮತಿ ನೀಡಿದ ಪತ್ರ ಮುಖ್ಯಮಂತ್ರಿ ಸಚಿವಾಲಯಕ್ಕೆ ಮಂಗಳವಾರ ತಲುಪಿದೆ.  ಮುಂದಿನ ಕ್ರಮ ಜರುಗಿಸಲು ಈ ಪತ್ರವನ್ನು,  ವಿಶೇಷ ತನಿಖಾ ದಳಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯುತ್ತಿದ್ದ  ಭ್ರಷ್ಟಾಚಾರದ ಬಗ್ಗೆ ತನಿಖೆ  ಕೈಗೊಂಡಿದ್ದ ವಿಶೇಷ ತನಿಖಾ ದಳದ  ಮುಂದೆ ವಿಚಾರಣೆಗೆ ಹಾಜರಾಗಿದ್ದ ಐಎಎಸ್‌ ಅಧಿಕಾರಿ ಎಂ. ಲಕ್ಷ್ಮೀನಾರಾಯಣ, ನಿವೃತ್ತ ಐಎಎಸ್‌ ಅಧಿಕಾರಿ ಪ್ರಕಾಶ್‌ ಮತ್ತಿತರರು, ಭಾಸ್ಕರರಾವ್‌ ಪುತ್ರ ಅಶ್ವಿನ್ ರಾವ್‌ ಅವರು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಕ್ಷ್ಯ ಹೇಳಿದ್ದರು. ಈ ಕಾರಣದಿಂದಾಗಿ ಭಾಸ್ಕರರಾವ್‌ ಅವರ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೋರಿ ವಿಶೇಷ ತನಿಖಾ ದಳ (ಎಸ್ಐಟಿ) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆಗಾಗಿ ಭಾಸ್ಕರರಾವ್‌ ಕೋರಿಕೆ ಮೇರೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿ ಆದೇಶ ಹೊರಡಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ವಿವಿಧ ಕಲಂಗಳಡಿ ಭಾಸ್ಕರರಾವ್‌ ಅವರನ್ನೂ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಅನುಮತಿ ಕೋರಿತ್ತು. ತನಿಖೆ ಕೈಗೆತ್ತಿಕೊಂಡಿದ್ದ ತನಿಖಾ ದಳ, ಅಶ್ವಿನ್‌ರಾವ್‌ ಸೇರಿದಂತೆ ಹಲವರನ್ನು ಬಂಧಿಸಿತ್ತು.

SCROLL FOR NEXT