ಬೆಳಗಾವಿ: ಮರಳು ಲಾರಿಯನ್ನು ತಡೆಹಿಡಿದಿದ್ದ ಬೆಳಗಾವಿ ಪಿಎಸ್ಐ ಉದ್ದಪ್ಪ ಅವರಿಗೆ ಲಾರಿಯನ್ನು ಬಿಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರವಾಣಿ ಮೂಲಕ ಧರ್ಮಿ ಹಾಕಿದ್ದಾರೆ.
ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಿಂದ ಪೇಚಿಗೆ ಸಿಲುಕಿರುವ ಕಾಂಗ್ರೆಸ್ ಗೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ದೂರವಾಣಿಯಲ್ಲಿ ಧಮ್ಕಿ ಹಾಕಿರುವುದು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ನಾಲ್ಕು ದಿನಗಳ ಹಿಂದೆ ನಡೆದಿದ್ದ ಘಟನೆ ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪಿಎಸ್ಐ ವಶಕ್ಕೆ ಪಡೆದಿದ್ದ ಮರಳು ಲಾರಿಯನ್ನು ಬಿಟ್ಟು ಕಳುಹಿಸಿ ಎಂದು ಹೆಬ್ಬಾಳ್ಕರ್ ದೂರವಾಣಿ ಮೂಲಕ ಪಿಎಸ್ಐಗೆ ಹೇಳಿದ್ದಾರೆ. ಇದಕ್ಕೆ ಪಿಎಸ್ಐ ಇಲ್ಲ ಮೇಡಂ ಡಿಸಿ ಅವರ ಆದೇಶದ ಮೇರೆಗೆ 6 ಗಂಟೆ ನಂತರ ಸಂಚರಿಸುವ ಮರಳು ಲಾರಿಯನ್ನು ವಶಪಡಿಸಿಕೊಳ್ಳಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಅದಕ್ಕೆ ಲಕ್ಷ್ಮೀ ಅವರು ನನಗೂ ಕಾನೂನು ಗೊತ್ತು...ಲಾರಿ ಬಿಟ್ಟು ಕಳುಹಿಸಿ ಎಂದಾಗ ಪಿಎಸ್ಐ ಉದ್ದಪ್ಪ ಅವರು ಆಗಲ್ಲ ಮೇಡಂ ಎಂದಿದ್ದಾರೆ. ಯಾಕ್ ಆಗಲ್ಲ ಕೂಡಲೇ ನನ್ನ ಬಂದು ಭೇಟಿಯಾಗಿ ಎಂದಿದ್ದರು. ನಾನ್ ಯಾಕ್ ಮೇಡಂ ನಿಮ್ಮನ್ನು ಭೇಟಿಯಾಗಬೇಕು ಎಂದು ಪಿಎಸ್ಐ ತಿರುಗೇಟು ನೀಡಿದಾಗ ನಿಮಗೆ ಏನ್ ಮಾಡಬೇಕು ಎಂದು ನನಗೆ ಗೊತ್ತು ಎಂದು ಧಮ್ಕಿ ಹಾಕಿದ್ದಾರೆ.
ನಾನು ಯಾರಿಗೂ ಧಮ್ಕಿ ಹಾಕಿಲ್ಲ: ಹೆಬ್ಬಾಳ್ಕರ್
ನಾನು ಯಾರಿಗೂ ಧಮ್ಕಿ ಹಾಕಿಲ್ಲ. ಪಾಸ್ ಇದ್ದ ಮರಳು ಲಾರಿಗಳನ್ನು ಬಿಡಲು ಕರೆ ಮಾಡಿದ್ದೆ. ನನ್ನ ಕ್ಷೇತ್ರದ ಜನರ ಲಾರಿಗಳನ್ನು ಹಿಡಿದಿದ್ದರಿಂದ ಕರೆ ಮಾಡಿದ್ದೆ. ಜನರಿಗೆ ಆದ ಅನ್ಯಾಯವನ್ನು ಪ್ರಶ್ನಿಸಲು ಭಾವೋದ್ವೇಗಕ್ಕೆ ಒಳಗಾಗಿದ್ದೆ ಅಷ್ಟೇ ಎಂದು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos