ಬೆಂಗಳೂರು: ರಾಜ್ಯದ ಮಧ್ಯಮ ಮತ್ತು ಸಣ್ಣ ನಗರಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲು ಆಗಸ್ಟ್ ಮೊದಲ ವಾರದ ವೇಳೆಗೆ ರಾಜ್ಯ ರಸ್ತೆ ಸಾರಿಗೆ ನಿಗಮ 737 ಹೊಸ ನಗರ ಬಸ್ಸುಗಳನ್ನು ಸಂಚಾರಕ್ಕೆ ಬಿಡಲಿದೆ.
ಆಧುನಿಕ ಶೈಲಿಯ ಬಸ್ಸುಗಳು ಇವಾಗಿದ್ದು, ಸಿಸಿಟಿವಿ ಕ್ಯಾಮರಾ, ಪಾನಿಕ್ ಬಟನ್, ಚಾಲಕರಿಗೆ ರೇರ್ ವ್ಯೂ ಕ್ಯಾಮರಾ, ಎಲ್ ಇಡಿ ಡಿಸ್ಪ್ಲೇಯನ್ನು ಹೊಂದಿರುವ ಧ್ವನಿ ಘೋಷಣೆ ವ್ಯವಸ್ಥೆ ಮೊದಲಾದವುಗಳನ್ನು ಹೊಂದಿರುತ್ತವೆ. ಪ್ರಯಾಣಿಕರ ಮನವಿಯ ತಂಗುದಾಣ ಬಝರ್ ಕೂಡ ಈ ಬಸ್ಸುಗಳಲ್ಲಿದ್ದು, ಬಸ್ಸುಗಳನ್ನು ನಿಲ್ಲಿಸಬೇಕೆಂದರೆ ಪ್ರಯಾಣಿಕರು ಚಾಲಕರಲ್ಲಿ ಮನವಿ ಮಾಡಿಕೊಳ್ಳಬಹುದು.
ಈ ಹೊಸ ಬಸ್ಸುಗಳು ಮಂಗಳೂರು, ಉಡುಪಿ, ಕೆಜಿಎಫ್, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ, ತುಮಕೂರು, ಕೋಲಾರ ಮತ್ತು ಚಿತ್ರದುರ್ಗಗಳಲ್ಲಿ ಕಾರ್ಯನಿರ್ವಹಿಸಲಿವೆ.
'' ಇದೇ ಮೊದಲ ಬಾರಿಗೆ ಬಸ್ಸುಗಳಲ್ಲಿ ಪಾನಿಕ್ ಬಟನ್ ಗಳನ್ನು ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಬಳಸುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಪಾನಿಕ್ ಬಟನ್ ಗಳು ಪ್ರಯೋಜನಕಾರಿಯಾಗಲಿವೆ ಎಂದು ಕೆಎಸ್ ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ಈ ಬಸ್ಸುಗಳ ಸಂಚಾರವನ್ನು ಕೇಂದ್ರ ನಿಯಂತ್ರಣ ಕೊಠಡಿ ಜಿಪಿಎಸ್ ಸೌಲಭ್ಯದ ನೆರವಿನಿಂದ ನಿಗಾವಹಿಸಲಿದೆ. ಬಸ್ಸಿನ ಚಾಲಕ ಪಾನಿಕ್ ಬಟನ್ ನ್ನು ಒತ್ತಿದಾಗ ಕೆಎಸ್ ಆರ್ ಟಿಸಿಯ ಕೇಂದ್ರ ನಿಯಂತ್ರಣ ಕೊಠಡಿಗೆ ಮತ್ತು ಹತ್ತಿರದ ಪೊಲೀಸ್ ಸ್ಟೇಶನ್ ಗೆ ಎಚ್ಚರಿಕೆಯ ಸಿಗ್ನಲ್ ಹೋಗುತ್ತದೆ.
ರಾಜ್ಯದ ಸಣ್ಣ ನಗರಗಳಲ್ಲಿರುವ ಸಾವಿರಾರು ಪ್ರಯಾಣಿಕರಿಗೆ ಈ ಹೊಸ ಬಸ್ಸು ಉಪಯೋಗವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಇಂದು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಯಾಣಿಕರು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಸರಿಯಾಗಿಲ್ಲದೆ ಆಟೋ, ಜೀಪು, ಮ್ಯಾಕ್ಸಿ ಕ್ಯಾಬ್ ಗಳಲ್ಲಿ ಓಡಾಡಬೇಕಾಗುತ್ತದೆ ಎಂದು ಕಠಾರಿಯಾ ತಿಳಿಸಿದರು.
'' ಹೊಸ ಬಸ್ಸು ಪ್ರಯಾಣಿಕ ಸ್ನೇಹಿಯಾಗಿದೆ. 35ರಿಂದ 60 ಪ್ರಯಾಣಿಕರು ಇದರಲ್ಲಿ ಒಂದು ಬಾರಿಗೆ ಪ್ರಯಾಣಿಸಬಹುದು. ಪ್ರಸ್ತುತ ಕೆಎಸ್ ಆರ್ ಟಿಸಿಯಲ್ಲಿ 540 ನಗರ ಬಸ್ಸುಗಳು ಮಧ್ಯಮ ಹಾಗೂ ಸಣ್ಣ ನಗರಗಳಲ್ಲಿ ಸಂಚರಿಸುತ್ತಿದ್ದು, ಸರಾಸರಿ ಮೂರೂವರೆ ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಾರೆ. ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್ ಆರ್ ಟಿಸಿ ಈ ಸೌಲಭ್ಯ ತಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos