ರಾಜ್ಯ

ಹಾಸನ ಉಪ ವಿಭಾಗಾಧಿಕಾರಿ ವಿಜಯಾ ಆತ್ಮಹತ್ಯೆಗೆ ಯತ್ನ

Lingaraj Badiger
ಹಾಸನ: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನ ಪ್ರಕರಣಗಳು ಹೆಚ್ಚುತ್ತಿದ್ದು, ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರೂಪಾ ತಂಬದ ಆತ್ಮಹತ್ಯೆ ಯತ್ನ ಪ್ರಕರಣ ಮಾಸುವ ಮುನ್ನವೇ ಹಾಸನದ ಉಪ-ವಿಭಾಗ ಅಧಿಕಾರಿ(ಎಸಿ) ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾಸನ ಎಸಿ ಇ.ವಿಜಯಾ ಅವರು ಇಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ವಿಜಯಾ ಅವರನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.
ಕೆಲಸದ ಒತ್ತಡ ಹಾಗೂ ಕೆಲವು ರಾಜಕೀಯ ಮುಖಂಡರ ಒತ್ತಡದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ವಿಜಯಾ ಅವರಿಗೆ ಇತ್ತೀಚಿಗೆ ಕಿಮ್ಸ್ ಆಡಳಿತ ಅಧಿಕಾರಿಯಾಗಿ ವರ್ಗಾವಣೆಯಾಗಿತ್ತು. ಆದರೆ ಅದಕ್ಕೆ ಕೆಎಟಿಯಿಂದ ತಡೆ ತಂದು, ಎಸಿಯಾಗಿಯೇ ಮುಂದುವರೆದಿದ್ದರು. ಆದರೆ ಇದನ್ನು ವಿರೋಧಿಸಿ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ವಿಜಯಾ ವಿರುದ್ದ ಪ್ರತಿಭಟನೆಗಳು ನಡೆದಿದ್ದವು.
SCROLL FOR NEXT