ರಾಜ್ಯ

ಹದಗೆಟ್ಟ ಬೆಳ್ಳಂದೂರು ರಸ್ತೆ: ಶಾಲೆಗೆ ಮಕ್ಕಳ ಒಯ್ಯಲು ನಿರಾಕರಿಸಿದ ಚಾಲಕರು

Manjula VN

ಬೆಂಗಳೂರು: ನಗರದ ಬೆಳ್ಳಂದೂರು ವಿಚಾರ ಇದೀಗ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇಷ್ಟು ದಿನ ಕೆರೆ ಕುರಿತು ಹಲವಾರು ಸಂಕಷ್ಟ ಎದುರಿಸುತ್ತಿದ್ದ ಜನತೆಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ ರಸ್ತೆಗಳು ಹದಗೆಟ್ಟಿದ್ದು, ರಸ್ತೆಗಳೆಲ್ಲಾ ನೀರಿನಿಂದ ಆವೃತ್ತವಾಗಿದೆ. ಅಲ್ಲದೆ, ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ಎದುರಾಗುತ್ತಿದ್ದು, ಇಲ್ಲಿನ ಶಾಲಾ ವಾಹನ ಚಾಲಕರು ಇದೀಗ ಮಕ್ಕಳನ್ನು ಶಾಲೆಗೆ ಒಯ್ಯಲು ಸಾಧ್ಯವಿಲ್ಲ ಎಂದು ಹೇಳಿ ಕೈಚೆಲ್ಲುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.

 ಬೆಳ್ಳಂದೂರಿನಲ್ಲಿರುವ ರಸ್ತೆಗಳು ಹಾಳಾಗಿದ್ದು, ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ಬಹಳ ಕಷ್ವವಾಗಿದೆ. ಇದರಿಂದ ಮಕ್ಕಳನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ನಮ್ಮನ್ನು ನಿಂದಿಸುತ್ತಾರೆ. ಹೀಗಾಗಿ ಇಂತಹ ರಸ್ತೆಗಳಲ್ಲಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ವಾರದಲ್ಲಿ ಒಂದು ಅಥವಾ ಎರಡು ಬಾರಿಯಷ್ಟೇ ಹೋಗುತ್ತೇವೆ. ಇನ್ನು ಮಾನ್ಸೂನ್ ಮಳೆ ಕೂಡ ಬಂದಿದ್ದು, ರಸ್ತೆಗಳು ಇನ್ನಷ್ಟು ಹದಗೆಡುತ್ತಿದೆ. ಸಮಸ್ಯೆಗಳನ್ನು ಮತ್ತಷ್ಟು ಉಲ್ಭಣಗೊಳ್ಳುವಂತೆ ಮಾಡಿದೆ ಎಂದು ಶಾಲಾ ವಾಹನ ಬಸ್ ಚಾಲಕ ಕೀರ್ತಿ ಕುಮಾರ ಜಿ.ಸಿ ಹೇಳಿಕೊಂಡಿದ್ದಾರೆ.

ಬೆಳ್ಳಂದೂರು ಅತೀ ಹೆಚ್ಚು ಸಂಖ್ಯೆ ವಾರ್ಡ್ ಗಳನ್ನು ಹೊಂದಿರುವ ನಗರವಾಗಿದ್ದು, ಇಲ್ಲಿ ಒಟ್ಟು 150 ವಾರ್ಡ್ ಗಳಿವೆ. ರಿಂಗ್ ರೋಡ್ ಬೃಹತ್ ಬೆಂಗಳೂರು ನಗರ ಪಾಲಿಕೆ ನೋಡಿಕೊಳ್ಳುತ್ತಿದ್ದು, ಬೆಳ್ಳಂದೂರು ರಸ್ತೆಗಳ ಅಭಿವೃದ್ಧಿಯನ್ನು ಈ ವರೆಗೂ ಬಿಬಿಎಂಪಿ ಅಧೀನಕ್ಕೆ ನೀಡಿಲ್ಲ.

ಬೆಳ್ಳಂದೂರಿನಿಂದ ಕಡುಬೀಸ್ನಹಳ್ಳಿಯವರೆಗಿನ ರಸ್ತೆಗಳನ್ನು 15 ದಿನಗಳೊಳಗಾಗಿ ಸರಿಪಡಿಸಲಾಗುತ್ತದೆ. ಕಾಮಗಾರಿ ಕೆಲಸಗಳನ್ನು ಎರಡು ದಿನಗಳ ಹಿಂದೆಯೇ ಆರಂಭಿಸಲಾಗಿದೆ ಎಂದು ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಜಯ್ ಶಂಕರ್ ರೆಡ್ಡಿ ಅವರು ಹೇಳಿದ್ದಾರೆ.

ಇನ್ನು ಸಮಸ್ಯೆ ಕುರಿತಂತೆ ಮಾತನಾಡಲು ಬೆಳ್ಳಂದೂರು ವಾರ್ಡ್ ಗಳ ಕಾರ್ಪೊರೇಟರ್ ಆಶಾ ಸುರೇಶ್ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದಾಗ ಆಶಾ ಸುರೇಶ್ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಬದಲಾಗಿ ಆಶಾ ಅವರ ಪತಿ ಸುರೇಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬಿಡಿಎ ಬಿಡುತ್ತಿಲ್ಲ. ಇದೀಗ ಬಿಬಿಎಂಪಿ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದ್ದಾರೆ.

SCROLL FOR NEXT