ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯನ್ನು ಅಸ್ಥಿತ್ವಕ್ಕೆ ತರುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಸಿಎಂ ಸಿದ್ದರಾಮಯ್ಯ ಅವರು, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಸಂವಿಧಾನಿಕ ಸ್ವತಂತ್ರ್ಯ ಸಂಸ್ಥೆಯಾದ ಲೋಕಾಯುಕ್ತಯನ್ನು ಸರ್ಕಾರದ ಯಾವುದೇ ಸಂಸ್ಥೆ ದುರ್ಬಲಗೊಳಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದ ಮೇರೆಗೆ ಭ್ರಷ್ಟಾಚಾರ ಪ್ರಕರಣಗಳ ಕುರಿತು ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಸಿಬಿ ರಚನೆಯಾಗುತ್ತಿದೆ ಎಂದು ಹೇಳಿದರು.
ಇನ್ನು ಇಂತಹುದೇ ಅಭಿಪ್ರಾಯವನ್ನು ಸಚಿವರಾದ ಟಿಬಿ ಜಯಚಂದ್ರ ಅವರು ವ್ಯಕ್ತಪಡಿಸಿದ್ದು, "ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಪ್ರತಿ ಇಲಾಖೆಗಳಲ್ಲೂ ಜಾಗೃತ ಕೋಶಗಳನ್ನು ಸ್ಥಾಪಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಲೋಕಾಯುಕ್ತವನ್ನು ದುರ್ಬಲಗೊಳಿಸಲಾಗುತ್ತಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದರು.
ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಜಾಗೃತಿ ಕೋಶಗಳು ಸ್ವತಂತ್ರವಾಗಿಯೇ ಕಾರ್ಯನಿರ್ವಹಿಸಲಿವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಟ್ಟರೆ, ಲೋಕಾಯುಕ್ತ ಕಾಯ್ದೆಯು ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುತ್ತದೆ. ಎಸಿಬಿ ರಚನೆಯಿಂದ ಲೋಕಾಯುಕ್ತ ಸಂಸ್ಥೆಗೆ ಯಾವುದೇ ರೀತಿಯ ಹಾನಿಇಲ್ಲ. ಅಂತೆಯೇ "ಈವರೆಗೂ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯನ್ನು ಪೊಲೀಸ್ ಇಲಾಖೆಯವರೇ ನಿರ್ವಹಿಸುತ್ತಿದ್ದು, ಉಸ್ತುವಾರಿಯನ್ನು ಲೋಕಾಯುಕ್ತಕ್ಕೆ ನೀಡಲಾಗಿತ್ತು. ಇದರಿಂದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತದವರೇ ನಿರ್ವಹಿಸುತ್ತಿದ್ದಾರೆಂಬ ತಪ್ಪು ಭಾವನೆ ಜನರಲ್ಲಿ ಮೂಡಿದ್ದು, ಇದರಿಂದಲೇ ಗೊಂದಲ ನಿರ್ಮಾಣವಾಗಿದೆ ಎಂದರು.
ಲೋಕಾಯುಕ್ತ/ಉಪಲೋಕಾಯುಕ್ತ ಹುದ್ದೆ ಖಾಲಿ ಇರುವುದರಿಂದ ಕಳೆದ ಒಂದು ವರ್ಷದಿಂದ ಎಲ್ಲಾ ಪ್ರಕರಣಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದಂತೆ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯನ್ವಯ ಮುಖ್ಯ ಕಾರ್ಯದರ್ಶಿಗಳ ಮೇಲುಸ್ತುವಾರಿಯಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ವಿಜಿಲೆನ್ಸ್ ಸೆಲ್ ಅನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ರಾಜ್ಯ ಮಟ್ಟದಲ್ಲಿ ಭ್ರಷ್ಠಾಚಾರ ನಿಗ್ರಹ ಘಟಕವನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತದೆ. ಈ ಘಟಕಕ್ಕೆ ಒಬ್ಬ ಐಜಿಪಿ, 10 ಎಸ್.ಪಿ.ಗಳು, 35 ಡಿವೈಎಸ್ಪಿಗಳು, 75 ಪೊಲೀಸ್ ಇನ್ಸ್ಪೆಕ್ಟರ್ಗಳು ಮತ್ತು 200 ಹೆಡ್ ಕಾನ್ಸ್ಟೇಬಲ್ ಅಥವಾ ಕಾನ್ಸ್ಟೇಬಲ್ಗಳು ಸೇರಿದಂತೆ 322 ಸಿಬ್ಬಂದಿಯನ್ನು ಒದಗಿಸಲಾಗುವುದು. ಅಲ್ಲದೆ ಇಲಾಖಾವಾರು ಜಾಗೃತ ಕೋಶಗಳಿಗೂ ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದು ಹೇಳಿದರು.
ಜಾಗೃತ ಕೋಶಗಳು ಹಾಗೂ ಭ್ರಷ್ಠಾಚಾರ ನಿಗ್ರಹ ಘಟಕಗಳ ಮೇಲುಸ್ತುವಾರಿ ಹಾಗೂ ಅವುಗಳನ್ನು ಬಲಪಡಿಸಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಾಗೃತ ಸಲಹಾ ಮಂಡಳಿಯನ್ನು ರಚಿಸಲಾಗುವುದು. ಕೇಂದ್ರ ಕಾಯ್ದೆಯಡಿ ಈ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಜಯಚಂದ್ರ ಅವರು ಸ್ಪಷ್ಟಪಡಿಸಿದರು.