ಬೆಳಗಾವಿ: ಕಾವೇರಿ ಮತ್ತು ಕೃಷ್ಣಾ ನದಿ ಜಲವಿವಾದ ಸಂಬಂಧ ಕರ್ನಾಟಕ ಸರ್ಕಾರ ಇದುವರೆಗೂ ಕೋಟ್ಯಂತರ ರೂ ಹಣವನ್ನು ವಕೀಲರಿಗಾಗಿ ನೀಡಿದೆ, ಆದರೆ ಇಷ್ಟೊಂದು ಪ್ರಮಾಣದಲ್ಲಿ ಹಣ ಪಾವತಿ ಮಾಡಿದ್ದರೂ ರಾಜ್ಯಕ್ಕೆ ಸೂಕ್ತ ನ್ಯಾಯ ಸಿಗದೇ, ಪ್ರತಿ ಬಾರಿಯೂ ಅನ್ಯಾಯವಾಗುತ್ತಲೇ ಬಂದಿದೆ.
ಕಾವೇರಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿಯಲ್ಲಿ ರಾಜ್ಯದ ಪರ ವಾದ ಮಂಡಿಸಲು ಹಾಜರಾದ ವಕೀಲರಿಗೆ ಇದುವರೆಗೆ ಸರ್ಕಾರ ಒಟ್ಟು ರು. 76.21 ಕೋಟಿ ಶುಲ್ಕ ಪಾವತಿಸಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ವ್ಯಾಜ್ಯಕ್ಕೆ ಸರ್ಕಾರ ವಕೀಲರಿಗೆ ಒಟ್ಟು 36,52,07,674 ಕೋಟಿ ಹಣವನ್ನು ವಕೀಲರ ಶುಲ್ಕ ಪಾವತಿಸಿದೆ. ಇನ್ನೂ ಕೃಷ್ಣಾ ನದಿ ವಿವಾದ ಸಂಬಂಧ ವಕೀಲರಿಗೆ 39,69,16,098 ಕೋಟಿ ಶುಲ್ಕ ಪಾವತಿಸಿದೆ. ವಕೀಲರ ಪ್ರಯಾಣ ವೆಚ್ಚ, ಹೋಟೆಲ್ ಬಿಲ್ ಸೇರಿದಂತೆ 1,99,69,698 ಕೋಟಿ ರೂ ಹಣ ವೆಚ್ಚವಾಗಿದೆ.
ಈ ಎರಡೂ ನದಿಗಳ ಜಲವಿವಾದಕ್ಕೆ ಸಂಬಂಧಿಸಿದಂತೆ ಅನಿಲ್ ದಿವಾನ್ ಹಾಗೂ ಫಾಲಿ ಎಸ್. ನಾರಿಮನ್ ನೇತೃತ್ವದ 21 ಜನ ವಕೀಲರ ತಂಡವು ರಾಜ್ಯದ ಪರ ವಾದ ಮಂಡಿಸಿತ್ತು. ಕಾವೇರಿ ಹಾಗೂ ಕೃಷ್ಣಾ ಜಲ ನ್ಯಾಯಮಂಡಳಿ ರಚನೆಯಿಂದ ರಾಜ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ ಎಂದು ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿವಾದದಲ್ಲಿ ವಾದ ಮಂಡಿಸಿದ ವಕೀಲರಿಗೆ ರು.36.52 ಕೋಟಿ ಮತ್ತು ಕೃಷ್ಣಾ ವಿವಾದದಲ್ಲಿ ವಾದ ಮಂಡಿಸಿದ ವಕೀಲರಿಗೆ ರು. 39.69 ಕೋಟಿ ಶುಲ್ಕ ಪಾವತಿಸಲಾಗಿದೆ.
ರಾಜ್ಯ ಸರ್ಕಾರದಿಂದ ಕೋಟಿಗಟ್ಟಲೆ ಶುಲ್ಕ ಪಡೆದ ವಕೀಲರು ಈಗ ವಾದ ಮಾಡುವುದಿಲ್ಲವೆಂದು ಹಿಂದಕ್ಕೆ ಸರಿಯುವುದು ಎಷ್ಟು ಸರಿ? ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ವಕೀಲರು ಹೇಳುತ್ತಿರುವುದು ಎಷ್ಟು ಸಮಂಜಸ? ವಾದ ಮಂಡಿಸಲು ಸಾಧ್ಯವಾಗದಿದ್ದರೆ ಸರ್ಕಾರದಿಂದ ಶುಲ್ಕ ರೂಪದಲ್ಲಿ ಪಡೆದ ಹಣವನ್ನು ವಾಪಸ್ ನೀಡಲಿ ಎಂದು ಒತ್ತಾಯಿಸಿದರು.