ಬೆಂಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಲೇಡಿ ರೌಡಿ ಶೀಟರ್ ಯಶಸ್ವಿನಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಉಷಾರಾಣಿ ಎಂಬುವವರ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದು, ಕಳೆದ ಕೆಲವು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದಳು.
ಉಷಾ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಪೊಲೀಸರು ಯಶಸ್ವಿನಿಯನ್ನು ಬಂಧಿಸಿದ್ದರು. ಆದರೆ ಎದೆ ನೋವು ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಲೇಡಿ ರೌಡಿ, ಮೇ 13ರಂದು ಅಲ್ಲಿಂದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಳು. ಯಶಸ್ವಿನಿ ಹಿಡಿಯಲು ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಕಡೆಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಇಂದು ಲೇಡಿ ರೌಡಿ ಯಶಸ್ವಿನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
'ಹಣಕಾಸು ವಿಚಾರದಲ್ಲಿ ಜಗಳ ಮಾಡಿಕೊಂಡು ನನ್ನ ಮನೆಗೆ ನುಗ್ಗಿ, ನನ್ನ ಮೇಲೆ ಯಶಸ್ವಿನಿ ಹಲ್ಲೆ ಮಾಡಿದ್ದಾಳೆ' ಎಂದು ಉಷಾರಾಣಿ ಪೊಲೀಸರಿಗೆ ದೂರು ನೀಡಿದ್ದರು.