ರಾಜ್ಯ

ಆರ್ ಡಿಪಿಆರ್ ಇಂಜಿನೀಯರ್ ಕೈ ಕತ್ತರಿಸಿದ ಪ್ರಕರಣ: ಐವರ ಬಂಧನ

Shilpa D

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಂಜಿನೀಯರ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಶ್ರೀನಿವಾಸ್ ಅವರು ಮನ್ರೇಗಾ ಯೋಜನೆಯ ತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಸೆಪ್ಟಂಬರ್ 12 ರಂದು ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಾಗಡಿಯಿಂದ ಕುಣಿಗಲ್ ಗೆ ಹೋಗುತ್ತಿದ್ದ ಶ್ರೀನಿವಾಸ್ ಅವರ ಕೈ ಕತ್ತರಿಸಿ ಪರಾರಿಯಾಗಿದ್ದರು.

ಚನ್ನಕೇಶವ ಅಲಿಯಾಸ್ ಕೇಶವ, ಮಂಜುನಾಥ್ ಬಂಧಿತ ಗುತ್ತಿಗೆದಾರರು, ಉವರ ಸಹಚರರಾದ ಪುನೀತ್ ಮತ್ತು ಲಕ್ಷ್ಮಣ್ ಮತ್ತು ಚಿಕ್ಕಣ್ಣ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ, ಬಂಧಿತರು ಕುಣಿಗಲ್ ಮೂಲದವರಾಗಿದ್ದಾರೆ.

ಮಂಜುನಾಥ್ ಮತ್ತು ಕೇಶವ ಇಬ್ಬರು ಮನ್ರೇಗಾದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು, ಕುಣಿಗಲ್ ತಾಲೂಕಿನ ಚಿಕ್ಕಹೊನ್ನಯ್ಯನಪಾಳ್ಯ ಗ್ರಾಮದಲ್ಲಿ ಮನ್ರೇಗಾ ಯೋಜನೆಯಡಿಯಲ್ಲಿ ಕೆಲ ಕಾರ್ಯಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಕೆಲಸಕ್ಕೆ ಪ್ರಮಾಣಪತ್ರ ಅಗತ್ಯವಿದ್ದ ಹಿನ್ನೆಲೆಯಲ್ಲಿ ಪ್ರಮಾಣಪತ್ರ ನೀಡುವಂತೆ ಇಬ್ಬರೂ ಶ್ರೀನಿವಾಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಗುತ್ತಿಗೆದಾರರು ಮಾಡಿದ್ದ ಕೆಲಸದಲ್ಲಿ ದೋಷಗಳಿವೆ ಎಂದು ಕೆಲ ಸ್ಥಳೀಯರು ಆರೋಪಿಸಿದ್ದರು. ಇದರಂತೆ ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆರೋಪ ಸತ್ಯವೆಂದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರು ಕೆಲಸದಲ್ಲಿ ದೋಷವಿದೆ ಎಂದು ಹೇಳಿ, ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದರು.

SCROLL FOR NEXT