ಕರಡಿ ಜತೆ ಸೆಣಸುತ್ತಿರುವ ನಾಯಿ
ಮುಂಡಗೋಡ (ಉತ್ತರಕನ್ನಡ): ಯಜಮಾನನ ಜತೆ ದನ ಮೇಯಿಸಲು ಕಾಡಿಗೆ ಹೋದ ನಾಯಿ, ಕರಡಿಯೊಂದಿಗೆ ಸೆಣಸಿ ಯಜಮಾನನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಯರಬೈಲು ಗ್ರಾಮದ 55 ವರ್ಷದ ಜುಡು ಮಾಕುಡಿಪಡೆ ತನ್ನ ಸಾಕುನಾಯಿಯೊಂದಿಗೆ ದನಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದರು. ಆ ವೇಳೆ ಕಾಡಿನಲ್ಲಿ ಮೂರು ಕರಡಿಗಳು ಜುಡು ಅವರ ಮೇಲೆ ದಾಳಿಗೆ ಮುಂದಾಗಿದೆ ಇದರಿಂದ ಭಯಗೊಂಡ ಅವರು ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಕಿರುಚಾಡಿದ್ದಾರೆ. ಆಗ ನಾಯಿಯು ಎರಡು ಕರಡಿಗಳನ್ನು ಅಟ್ಟಾಡಿಸಿ ಓಡಿಸಿದೆ. ಆದರೆ ಮತ್ತೊಂದು ಕರಡಿ ಜುಡು ಅವರನ್ನು ಹಿಡಿದು ಎಳೆದಾಡಿದ್ದು ಅವರ ಕೈ, ತಲೆ ಹಾಗೂ ದೇಹದ ಮೇಲೆ ಗಂಭೀರ ಗಾಯಗಳಾಗಿವೆ.
ಎರಡು ಕರಡಿಯನ್ನು ಓಡಿಸಿ ಬಂದ ನಾಯಿ ಯಜಮಾನನ ಮೇಲೆ ದಾಳಿ ಮಾಡುತ್ತಿದ್ದ ಮತ್ತೊಂದು ಕರಡಿಯನ್ನು ಕಚ್ಚಿದೆ. ನಾಯಿಗೆ ಹೆದರಿ ಆ ಕರಡಿಯು ಓಡಿಹೋಗಿದೆ. ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಜುಡುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕರಡಿ ದಾಳಿಯಿಂದ ಯಜಮಾನನ್ನು ರಕ್ಷಿಸಿ ನಾಯಿಯು ತನ್ನ ನಿಯತ್ತನ್ನು ಪ್ರದರ್ಶಿಸಿದೆ.