ರಾಜ್ಯ

"ಕಾವೇರಿ" ಮಧ್ಯಸ್ಥಿಕೆಗೆ "ಸುಪ್ರೀಂ" ಆದೇಶ; ಉಮಾಭಾರತಿ ನೇತೃತ್ವದಲ್ಲಿ ಸೆ.29ರಂದು ಸಭೆ

Srinivasamurthy VN

ನವದೆಹಲಿ: ಕಾವೇರಿ ವಿವಾದ ಸಂಬಂಧ ಆರಂಭದಿಂದಲೂ ಮಧ್ಯಸ್ಥಿಕೆ ವಹಿಸುವಂತೆ ಕೇಳುತ್ತಿದ್ದ ಕರ್ನಾಟಕದ ಮನವಿಗೆ ಸುಪ್ರೀಂಕೋರ್ಟ್ ಬೆಂಬಲ ನೀಡಿದ್ದು, ಸಂಧಾನ ಸಭೆ ನಡೆಸುವಂತೆ  ಸೂಚನೆ ನೀಡಿದೆ.

ಈ ಹಿನ್ನಲೆಯಲ್ಲಿ ನಾಳೆ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳ ಸಭೆ ಕರೆಯಲಾಗಿದ್ದು, ಕಾವೇರಿ  ನೀರು ಹಂಚಿಕೆ ಕುರಿತ ಸಮಸ್ಯೆ ನಿವಾರಣೆ ಕುರಿತಂತೆ ಚರ್ಚಿಸಲಾಗುತ್ತದೆ. ನವದೆಹಲಿಯಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಶ್ರಮಶಕ್ತಿ ಭವನದಲ್ಲಿ ನಡೆಯಲಿರುವ ಸಭೆಗೆ ಆಗಮಿಸುವಂತೆ ಎರಡೂ  ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ ಕಾವೇರಿ ಕಣಿವೆಯ ಇತರ ರಾಜ್ಯಗಳಾದ ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರಲು  ನಿರ್ಧರಿಸಲಾಗಿದೆ.

ಇನ್ನು ನಾಳೆ ನಡೆಯಲಿರುವ ಸಭೆಗೆ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸೇರಿದಂತೆ ನೀರಾವರಿ ಇಲಾಖೆಯ  ಮುಖ್ಯಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ. ಅಂತೆಯೇ ತಮಿಳುನಾಡು ಪರವಾಗಿ ಲೋಕೋಪಯೋಗಿ ಸಚಿವ ಎಡಪ್ಪಾಡಿ ಎಸ್ ಪಳನಿಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. ಸಿಎಂ  ಜಯಲಲಿತಾ ಅವರ ಅನಾರೋಗ್ಯದಿಂದಾಗಿ ಅವರು ನಾಳಿನ ಸಭೆಗೆ ಗೈರಾಗಲಿದ್ದು, ಅವರ ಬದಲಿಗೆ ಪಳನಿ ಸ್ವಾಮಿ ನೇತೃತ್ವದಲ್ಲಿ ಮೂವರ ತಂಡ ನಾಳಿನ ಸಭೆಯಲ್ಲಿ ತಮಿಳುನಾಡು  ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 5ರಂದು ಆರಂಭವಾದ ಕಾವೇರಿ ಬಿಕ್ಕಟ್ಟು ಸತತ 22 ದಿನಗಳಿಂದ ಮುಂದುವರಿದೇ ಇದೆ. ಸೆ. 5ರಂದು10 ದಿನಗಳ ಕಾಲ ನಿತ್ಯ 15,000, ಸೆ. 12 ರಂದು ಎಂಟು ದಿನಗಳ ಕಾಲ  12,000 ಕ್ಯುಸೆಕ್‌ ನೀರು ಹರಿಸುವಂತೆ ಆದೇಶ ಹೊರಡಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಪ್ರತಿಭಟನೆ, ಹಿಂಸಾಕೃತ್ಯಗಳಿಗೆ ಕಾವು ದೊರೆತಿತ್ತು.

SCROLL FOR NEXT