ಗುಲ್ಬರ್ಗಾ: ದಕ್ಷಿಣ ರಾಜ್ಯಗಳಲ್ಲಿ ಬೇಸಿಗೆಯ ಉರಿ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿ ನೀರಿಗೆ ತತ್ವಾರ ಕಂಡುಬರುತ್ತಿದೆ. ಗುಲ್ಬರ್ಗಾದಲ್ಲಿ ತಾಪಮಾನ ತೀವ್ರ ಏರಿಕೆಯಾಗಿದ್ದು 40 ಡಿಗ್ರಿಗೂ ಅಧಿಕ ಉಷ್ಣತೆ ಉಂಟಾಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಗುಲ್ಬರ್ಗಾದ ಗರೀಬ್ ನವಾಜ್ ಕಾಲೊನಿ ನಿವಾಸಿ, ನಮ್ಮ ನೆರವಿಗೆ ಬರುವಂತೆ ಸರ್ಕಾರವನ್ನು ಮನವಿ ಮಾಡುತ್ತಿದ್ದೇವೆ. ನಾವಿರುವ ಪ್ರದೇಶಕ್ಕೆ ಪ್ರತಿ ಎರಡು ದಿನಗಳಿಗೊಮ್ಮೆ ಒಂದು ಟ್ಯಾಂಕರ್ ನೀರು ಬರುತ್ತದೆ. ಆ ಟ್ಯಾಂಕರ್ ನ ನೀರಿಗಾಗಿ ಮಕ್ಕಳು ಮತ್ತು ಹೆಂಗಸರು ದಿನವಿಡೀ ಕಾಯಬೇಕಾಗುತ್ತದೆ. ಆದರೂ ಕೂಡ ಸಾಕಷ್ಟು ನೀರು ದೊರಕುವುದಿಲ್ಲ ಎಂದು ಹೇಳುತ್ತಾರೆ.
ರಾಜಕೀಯ ವ್ಯಕ್ತಿಗಳು ವೋಟು ಕೇಳಲು ಬಂದಾಗ ಭರವಸೆ ಕೊಡುತ್ತಾರೆ. ಆದರೆ ನಮಗೆ ಅಗತ್ಯವಿರುವಾಗ ಅವಶ್ಯಕತೆಯಿರುವುದನ್ನು ನೀಡಲು ಮರೆಯುತ್ತಾರೆ. ನಾವಿರುವ ಪ್ರದೇಶದಲ್ಲಿ ಬೋರ್ ವೆಲ್ ನಲ್ಲಿ ನೀರು ಖಾಲಿಯಾಗಿದೆ ಎಂದು ಸ್ಥಳೀಯರು ಸುದ್ದಿ ಸಂಸ್ಥೆಗೆ ತಿಳಿಸುತ್ತಾರೆ.
ಅಂತರ್ಜಲ ನೀರಿನ ಮಟ್ಟವನ್ನು ಕಂಡುಹಿಡಿಯಲು ಆಧುನಿಕ ತಂತ್ರಜ್ಞಾನವನ್ನು ಬಳಸಲು ಸರ್ಕಾರ ಯೋಜಿಸುತ್ತಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
2000 ಅಡಿ ಆಳಕ್ಕೆ ಕೊರೆದು ನೀರಿನ ಮೂಲವನ್ನು ಕಂಡುಹಿಡಿಯುವ ಯೋಜನೆ ಸರ್ಕಾರದ ಮುಂದಿದೆ ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ನಿಧಿಯನ್ನು ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.