ಪ್ಲಾಸ್ಟಿಕ್ ನಿಂದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಎನ್ ಜಿಒ ಸದಸ್ಯರು
ಬೆಂಗಳೂರು: ಬೆಂಗಳೂರಿನಲ್ಲಿ ಕೆರೆಗಳು ನಶಿಸಿ ಹೋಗುತ್ತಿರುವುದು ಒಂದೆಡೆಯಾದರೆ, ಮಲಿನಗೊಂಡು, ಬೆಂಕಿ ಹೊತ್ತುಕೊಳ್ಳುವ ಸ್ಥಿತಿಗೆ ತಲುಪಿರುವ ಕೆರೆಗಳು ಮತ್ತೊಂದೆಡೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನಾಗರಿಕರೇ ಸ್ವತಃ ಜವಾಬ್ದಾರಿಯನ್ನು ಅರಿತು ನಡೆದುಕೊಂಡರೆ ಅದರ ಪರಿಣಾಮ ಅದ್ಭುತವಾಗಿರುತ್ತದೆ ಎಂಬುದಕ್ಕೆ ಸಾಕ್ಷಿ ವಿನಾಯಕ ನಗರದ ವಿಭೂತಿ ಪುರ ಕೆರೆ.
ಹಲವು ವರ್ಷಗಳ ಹಿಂದೆ ಸ್ವಚ್ಛಂದವಾಗಿದ್ದ ಈ ಕೆರೆ ವಲಸೆ ಪಕ್ಷಿಗಳು, ನಳನಳಿಸುವ ಹೂ ಗಿಡಳಿಂದ ಆಕರ್ಷಣೀಯವಾಗಿರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆರೆಯ ಬಳಿ ಇರುವ ಮನೆಗಳ ತ್ಯಾಜ್ಯ ಕೆರೆಯನ್ನು ಸೇರುತ್ತಿದ್ದಿದ್ದರಿಂದ ಅದರ ಸ್ಥಿತಿ ಹದಗೆಡುವುದಕ್ಕೆ ಪ್ರಾರಂಭವಾಗಿತ್ತು. ತಕ್ಷಣವೇ ಎಚ್ಚೆತ್ತ ಭೂಮಿ ಎಂಬ ಎನ್ ಜಿಒ ತಂಡ ಕಳೆದ ವರ್ಷದಿಂದ ಕೆರೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಪ್ರಾರಂಭಿಸಿದೆ. ಪರಿಣಾಮವಾಗಿ ಕೆರೆಯ ಪರಿಸ್ಥಿತಿ ಸುಧಾರಿಸುತ್ತಿದೆ.
ಪ್ರತಿ ವಾರಾಂತ್ಯದಲ್ಲೂ ಕೆರೆಯನ್ನು ಸ್ವಚ್ಛಗೊಳಿಸುವ ಎನ್ ಜಿಒ ಕೆಲಸ ಪ್ರಾರಂಭವಾಗಿದ್ದು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ. ಎನ್ ಜಿಒ ಕೆರೆ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದಂತೆಯೇ ಸ್ಥಳೀಯರೂ ಸಹ ಎನ್ ಜಿಒ ಗೆ ಸಾಥ್ ನೀಡಿದ್ದಾರೆ ಎನ್ನುತ್ತಾರೆ ಎನ್ ಜಿಒ ದಲ್ಲಿ ಸಕ್ರಿಯರಾಗಿರುವ ಚೆಂತಿಲ್ ಕುಮಾರ್.
ಕೆರೆ ಸ್ವಚ್ಛತಾ ಅಭಿಯಾನ ಪ್ರಾರಂಭವಾಗುವುದಕ್ಕೂ ಕೆಲವು ತಿಂಗಳು ಮುನ್ನ ಕೆರೆ ಸ್ವಚ್ಛಗೊಳಿಸುವ ಬಗ್ಗೆ ಸರ್ಕಾರಿ ಅಧಿಕಾರಿಗಳು ಹಾಗೂ ಕೆರೆಯ ಹತ್ತಿರವೇ ವಾಸವಿರುವ ಜನರೊಂದಿಗೆ ಮಾತನಾಡಿದ್ದೆವು. ವರ್ತೂರು ಹಾಗೂ ಬೆಳ್ಳಂದೂರು ಕೆರೆಗಳಷ್ಟು ವಿಭೂತಿಪುರ ಕೆರೆ ಇನ್ನೂ ಹಾಳಾಗಿಲ್ಲ ಹೀಗಾಗಿ ವಿಭೂತಿ ಪುರ ಕೆರೆಯನ್ನು ಉಳಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎನ್ನುತ್ತಾರೆ ಕೆರೆ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಎನ್ ಜಿಒ ಸದಸ್ಯರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos