ಬೆಳಗಾವಿ/ ಅಥಣಿ: ತೆರೆದ ಕೊಳವೆ ಬಾವಿಗೆ ಬಿದ್ದಿರುವ ಆರು ವರ್ಷದ ಕಾವೇರಿ ಅಜಿತ್ ಮಾದರ್ ಬದುಕುಳಿಯವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ. ಇದರಿಂದಾಗಿ ಆಕೆಯ ಕುಟುಂಬಸ್ಥರಲ್ಲಿ ದುಃಖದ ಕಟ್ಟೆಯೊಡೆದಿದೆ.
ಬೆಳಗಾವಿಯಲ್ಲೇ ಅತಿ ದೊಡ್ಡ ರಕ್ಷಣೆ ಕಾರ್ಯಾಚರಣೆ ಎನಿಸಿಕೊಂಡಿದೆ. ಜಿಲ್ಲಾಡಳಿತ ಬಾಲಕಿಯನ್ನು ರಕ್ಷಿಸಲು ಕಳೆದ 30 ಗಂಟೆಗಳಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ರಕ್ಷಣಾ ತಂಡ ಆಕೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಅಕ್ಕಪಕ್ಕದ ಗ್ರಾಮದ ಜನರೆಲ್ಲಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದು ಕಾವೇರಿ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹುಕ್ ಬಳಸುವ ಮೂಲಕ ಕಾವೇರಿ ರಕ್ಷಣೆಗಾಗಿ ಹಲವು ಬಾಯಿ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ,
ಭಾನುವಾರ ಬೆಳಗ್ಗೆ ಕಾವೇರಿ ಕೊಳವೆ ಬಾವಿಯಲ್ಲಿ ಕಾಣಿಸಿದ ಮೇಲೆ ಆಕೆಯ ಮೇಲಿದ್ದ ಮಣ್ಣನ್ನು ರಕ್ಷಣಾ ತಂಡ ತೆರವುಗೊಳಿಸಿದೆ. ಒಂದು ಸಲ ಆಕೆಯ ಬಟ್ಟೆಗೆ ಹುಕ್ ಅನ್ನು ಸಿಕ್ಕಿಸಿ ಮೇಲೆತ್ತಲು ಪ್ರಯತ್ನಿಸಲಾಯಿತು, ಆದರೆ ಆಕೆಯ ಬಟ್ಟೆ ಹರಿದ ಕಾರಣ ಮೇಲೆತ್ತಲು ಸಾಧ್ಯವಾಗಲಿಲ್ಲ. ಆಕೆ ಮತ್ತಷ್ಟು ಕೆಳಗೆ ಜಾರಿ ಹೋಗುವುದನ್ನು ತಪ್ಪಿಸಲು ರ7ಮಾ ತಂಡ ಆಕೆಯ ಕೈಗೆ ಹಗ್ಗ ಕಟ್ಟಿತ್ತು.ಆದರೆ ಆ ಪ್ರಯತ್ನವೂ ಫಲ ಕೊಡಲಿಲ್ಲ. ಅರ್ಥ್ ಮೂವರ್ಸ್ ಬಳಸಿ ಬೋರ್ ವೆಲ್ ಸುತ್ತ ದೊಡ್ಡ ಪ್ರಮಾಣದಲ್ಲಿ ಹಳ್ಳಗಳನ್ನು ಕೊರೆಯಲಾಗಿದೆ.
ಮಗಳ ದುರಂತ ವನ್ನು ಅರಗಿಸಿಕೊಳ್ಳಲಾಗದ ಕಾವೇರಿ ತಾಯಿ ಸವಿತಾ ಹಲವು ಬಾರಿ ಪ್ರಜ್ಞಾ ಹೀನರಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಆಕೆಯನ್ನು ಆ್ಯಂಬುಲೆನ್ಸ್ ನಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.