ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಜಿ ಪದ್ಮಾವತಿ ಅವರು ತೆರಿಗಾರರ 200 ಕೋಟಿ ರುಪಾಯಿ ವ್ಯರ್ಥ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೆಡ್ಡಿ, ಕಸ ವಿಲೇವಾರಿ ಅವ್ಯವಹಾರದಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಶಾಮೀಲಾಗಿದ್ದು, ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರು. ನಷ್ಟ ಸಂಭವಿಸುತ್ತಿದೆ. ಈ ನಷ್ಟವನ್ನು ಕಾಂಗ್ರೆಸ್ನೋರು ಭರಿಸ್ತಾರಾ ಎಂದು ಪ್ರಶ್ನಸಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಕಸವಿಲೇವಾರಿ ಗುತ್ತಿಗೆಗೆ ಟೆಂಡರ್ ಕರೆಯದೆ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ ಸರ್ಕಾರಕ್ಕೆ ಶೇ.15ರಷ್ಟು ಸರ್ವೀಸ್ ಟ್ಯಾಕ್ಸ್ ಕಟ್ಟಬೇಕು. ಇದು ಮೇಯರ್ ಪದ್ಮಾವತಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಬೇಜವಾಬ್ದಾರಿತನದ ಪರಮಾವಧಿ. ಇದರಿಂದ ಸರ್ಕಾರಕ್ಕೆ ಸರ್ವೀಸ್ಚಾರ್ಜ್ ಮೂಲಕ 200 ಕೋಟಿಗೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ಹಣ ತೆರಿಗೆದಾರರ ದುಡ್ಡು. ಹಾಗಾಗಿ ಮೇಯರ್ ನಗರದ ನಾಗರಿಕರಿಗೆ ಉತ್ತರ ನೀಡಬೇಕೆಂದು ರೆಡ್ಡಿ ಒತ್ತಾಯಿಸಿದ್ದಾರೆ.
ಹಲವು ಸಭೆಗಳಲ್ಲಿ ಕಸವಿಲೇವಾರಿ ಗುತ್ತಿಗೆ ಕರೆಯಬೇಕೆಂದು ಒತ್ತಾಯ ಮಾಡಿದ್ದೆ. ಆದರೆ, ಆಡಳಿತ ನಡೆಸುತ್ತಿರುವವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ 200 ಕೋಟಿ ರು. ಹೊರೆ ಬಿದ್ದಿದೆ. ಇವರು ಬೆಂಗಳೂರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಸ ವಿಲೇವಾರಿ ಘಟಕಗಳನ್ನು ಮುಚ್ಚಿಸಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಕೇವಲ ಹಣ ಲಪಟಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.