ರಾಜ್ಯ

ಈಶ್ವರಪ್ಪ ಪಿಎ ಕಿಡ್ನಾಪ್ ಯತ್ನ ಪ್ರಕರಣ: ಯಡಿಯೂರಪ್ಪ ಆಪ್ತನ ವಿಚಾರಣೆ

Shilpa D
ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕನ ಅಪಹರಣ ಯತ್ನ ಪ್ರಕರಣ ಸಂಬಂಧ  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಸಂತೋಷ್ ಅವರು  ಸುಮಾರು ಆರು ತಾಸು ಪೊಲೀಸ್ ವಿಚಾರಣೆ ಎದುರಿಸಿದರು.
ಸಂತೋಷ್ ಅವರಿಗೆ ಸುಮಾರು 50 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಪಹರಣ ಯತ್ನ ಕೇಸ್ ನಲ್ಲಿ ತಮ್ಮ ಹೆಸರನ್ನು ಲಿಂಕ್ ಮಾಡಿರುವುದಕ್ಕೆ ಆಘಾತ ವ್ಯಕ್ತ ಪಡಿಸಿರುವ ಸಂತೋಷ್, ಅದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಬಿಜೆಪಿ ಯುವ ಮೋರ್ಚಾ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಹಾಗೂ ವಿನಯ್ ನನಗೆ ಆಪ್ತ ಸ್ನೇಹಿತರು. ಸ್ಥಳೀಯವಾಗಿ ಪಕ್ಷ ಸಂಘಟಿಸುವಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೆವು. ವಿನಯ್ ಅಪಹರಣ ಯತ್ನಕ್ಕೂ ನನಗೂ ಸಂಬಂಧವಿಲ್ಲ ಎಂದು ಸಂತೋಷ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆ.7ರಂದು ಸಂತೋಷ್‌ಗೆ ನೋಟಿಸ್ ನೀಡಿದ್ದರು. ಅದರಂತೆ, ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ಅವರು ತಮ್ಮ ವಕೀಲರ ಜತೆ ಮಲ್ಲೇಶ್ವರ ಉಪವಿಭಾಗದ ಎಸಿಪಿ ಕಚೇರಿಗೆ ತೆರಳಿದರು. ಸಂಜೆವರೆಗೂ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡ ಎಸಿಪಿ ಆನಂದ್ ಬಡಿಗೇರ್ ನೇತೃತ್ವದ ತಂಡ, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದೆ.
ಯಾವುದೋ ಸಿ.ಡಿಗಾಗಿ ವಿನಯ್ ಅಪಹರಣಕ್ಕೆ ಯತ್ನಿಸಲಾಯಿತು ಎಂದು ಕೇಳಿದ್ದಕ್ಕೆ ಯಾವ ಸಿ.ಡಿಯ ಬಗ್ಗೆಯೂ ನನಗೆ ಗೊತ್ತಿಲ್ಲ. ಈಗಲೂ ನಾವೂ ಪಕ್ಷ ಸಂಘಟಿಸುವ ಸ್ನೇಹಿತರು ಎಂದು ಹೇಳಿದ್ದಾರೆ.
SCROLL FOR NEXT