ಬೆಂಗಳೂರು: ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂವಿಜೆ ಪಾರ್ಕ್ ನಲ್ಲಿ ಆಟವಾಡುತ್ತಿದ್ದ 13 ವರ್ಷದ ಬಾಲಕಿ ಪ್ರಿಯಾ ಕಬ್ಬಿಣದ ಸಲಾಕೆ ತಲೆಗೆ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಬಿಬಿಎಂಪಿಯ ಎಂಜಿನಿಯರ್, ಸಿಬ್ಬಂದಿ ಹಾಗೂ ಉದ್ಯಾನವನದ ಭದ್ರತಾ ಸಿಬ್ಬಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಹದೇವಪುರ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನಿರ್ಲಕ್ಷ್ಯ ಕೇಸನ್ನು ವಾರ್ಡ್ ಎಂಜಿನಿಯರ್, ಉದ್ಯಾನವನದ ನಿರ್ವಹಣೆ ನೋಡಿಕೊಳ್ಳುವ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ಉದ್ಯಾನವನದ ಆವರಣ ಸುರಕ್ಷಿತವಾಗಿರಲಿಲ್ಲ. ದುರ್ಘಟನೆಗೆ ಕಾರಣವಾದ ಕಬ್ಬಿಣದ ಸಲಾಕೆಯನ್ನು ಮುಕ್ತವಾಗಿ ಇಡಲಾಗಿತ್ತು. ದುಸ್ಥಿತಿಯಲ್ಲಿರುವ ಸಲಾಕೆಯನ್ನು ತೆಗೆದಿಡಬೇಕಾಗಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಮುಂದಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.