ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಅಕ್ರಮ ಡಿನೊಟಿಪಿಕೇಶನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೆಎಎಸ್ ಅಧಿಕಾರಿಯೊಬ್ಬರ ಹೇಳಿಕೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಶಿವರಾಮ ಕಾರಂತ ಬಡಾವಣೆಯಲ್ಲಿ ಅಕ್ರಮ ಡಿನೊಟಿಫೀಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ತಪ್ಪು ಮಾಡಿದ್ದಾರೆಂದು ಹೇಳಿಕೆ ನೀಡುವಂತೆ ಎಸಿಬಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತನಿಖಾ ದಳದ ಉಪ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಬಸವರಾಜೇಂದ್ರ "ಬಾಂಬ್'ಸಿಡಿಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವಂತೆ ಎಸಿಬಿ ಡಿವೈಎಸ್ಪಿ ಬಾಲರಾಜ್ ಮತ್ತು ಜಾನ್ ಹಲವು ಬಾರಿ ಕರೆ ಮಾಡಿ ಒತ್ತಡ ಹೇರುತ್ತಿದ್ದಾರೆ. ನನ್ನ ಮೇಲೆ ಒತ್ತಡ ಹೇರಿ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದರೇ ಕೆಎಎಸ್ ನಿಂದ ಐಎಎಸ್ ಅಧಿಕಾರಿಯಾಗಿ ಬಡ್ತಿ ನೀಡುವ ಆಮೀಷ ಒಡ್ಡಿದ್ದಾರೆ ಎಂದು ದೂರಿದ್ದಾರೆ.
ನಾನು ಐಎಎಸ್ ಹುದ್ದೆಗೆ ಬಡ್ತಿ ನಿರೀಕ್ಷೆಯಲ್ಲಿದ್ದೇನೆ. ಹೀಗಾಗಿ ಬಾಲರಾಜ್ ತಾವು ಹೇಳಿದಂತೆ ಒಪ್ಪುವಂತೆ ಆಗ್ರಹಿಸಿದರು. ಆ ಸಂದರ್ಭದಲ್ಲಿ ನಾನು ಅವರ ಕಾನೂನು ಬಾಹಿರ ಬೇಡಿಕೆಗೆ ಸ್ಪಂದಿಸದೆ ಎಸಿಬಿ ಕಚೇರಿಯಿಂದ ಹೊರ ಬಂದೆ. ಎಸಿಬಿ ಅಧಿಕಾರಿಗಳ ಒತ್ತಡಕ್ಕೆ ಮಣಿಯದಿರುವುದಕ್ಕೆ ನನ್ನನ್ನು ಎರಡನೇ ಆರೋಪಿ ಎಂದು ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆಗಸ್ಟ್ 17 ರಂದು ಎಸಿಬಿ ಅಧಿಕಾರಿಗಳು ಮತ್ತೂಂದು ನೋಟಿಸ್ ನೀಡಿ, ಆಗಸ್ಟ್ 19 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದಾರೆ.
ಈ ಪ್ರಕರಣದಲ್ಲಿ ನನ್ನನ್ನು ಬಲಿ ಪಶು ಮಾಡಲಾಗುತ್ತಿದೆ. ಎಸಿಬಿ ಅಧಿಕಾರಿಗಳಿಂದ ನನಗೆ ಆಗುತ್ತಿರುವ ಕಿರುಕುಳವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ನನಗೆ ರಕ್ಷಣೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಗೆ ಸುಭಾಷ್ ಕುಂಟಿಯಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಇನ್ನೂ ಬಸವರಾಜೇಂದ್ರ ಅವರು ಪತ್ರ ಬರೆದಿರುವುದನ್ನು ಸ್ಪಷ್ಟ ಪಡಿಸಿರುವ ಕುಂಟಿಯಾ ಮುಂದೆ ಕೈಗೊಳ್ಳು ಕ್ರಮಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಈಗಾಗಲೇ ರಾಜ್ಯ ಸರ್ಕಾರ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸುತ್ತಿರುವ ಬಿಜೆಪಿಗೆ ಈ ಹೇಳಿಕೆಯಿಂದ ಮತ್ತಷ್ಟು ಬಲ ಬಂದಂತಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos