ಹುಣಸೂರು: ಹುಣಸೂರಿನಲ್ಲಿ ಡಿ.03 ರಂದು ಆಯೋಜಿಸಲಾಗಿದ್ದ ಹನುಮಂತ ಜಯಂತ್ಯುತ್ಸವದ ಮೆರವಣಿಗೆಯನ್ನು ಪೊಲೀಸರು ತಡೆದ ಪರಿಣಾಮ ಹನುಮ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಹನುಮಂತ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರೂ ಭಾಗವಹಿಸಬೇಕಿತ್ತು. ಆದರೆ ಪ್ರತಿಭಟನೆ ಹೆಚ್ಚುತ್ತಿದ್ದಂತೆಯೇ ಪೊಲೀಸರು ಹುಣಸೂರು ಪ್ರವೇಶಿಸುವ ಮುನ್ನವೇ ಮಾಲಾಧಾರಿ ಪ್ರತಾಪ್ ಸಿಂಹ ಅವರನ್ನು ವಶಕ್ಕೆ ಪಡೆದರು.
ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲವು ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದ್ದು, 150 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ವರದಿಯಾಗಿದೆ. ಹನುಮಂತ ಜಯಂತ್ಯುತ್ಸವಕ್ಕಾಗಿ ತೆರಳುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ಬಿಳಿಕೆರೆ ಬಳಿ ಬ್ಯಾರಿಕೇಡ್ ಹಾಕಲಾಯಿತು ಇದಕ್ಕೆ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್ ತಳ್ಳಿಕೊಂಡು ಮುಂದಕ್ಕೆ ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಡಿ.3 ರಂದು ಸಂಜೆ 6 ಗಂಟೆವರೆಗೆ ಹುಣಸೂರು ನಗರಕ್ಕೆ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos