ಬಿಬಿಎಂಪಿ ಮೇಯರ್ ಸಂಪತ್ ರಾಜ್ ಲಂದನ್ ನ ಮೇಯರ್ ಸಾಧಿಕ್ ಖಾನ್ ಅವರನ್ನು ಸ್ವಾಗತಿಸಿದರು
ಬೆಂಗಳೂರು: ಹವಾಮಾನ ವೈಪರೀತ್ಯ ಪರಿಹಾರಕ್ಕೆ ಹಾಗೂ ಹಸಿರುಮನೆ ಪರಿಣಾಮವನ್ನು ಕಡಿತಗೊಳಿಸಲು ಶ್ರಮಿಸುತ್ತಿರುವ ‘ಸಿ40 ಸಿಟೀಸ್ ಕ್ಲೈಮೆಟ್ ಲೀಡರ್ಶಿಪ್ ಗ್ರೂಪ್’ನ ‘ಸಿ40 ವಾಯುಗುಣಮಟ್ಟ ಜಾಲದ ಒಪ್ಪಂದಕ್ಕೆ ಬೆಂಗಳೂರಿನ ಮೇಯರ್ ಆರ್.ಸಂಪತ್ ರಾಜ್ ಮತ್ತು ಲಂಡನ್ ಮೇಯರ್ ಸಾದಿಕ್ ಖಾನ್ ಅವರುಗಳು ಸಹಿ ಹಾಕಿದ್ದಾರೆ.
ಇದರಲ್ಲಿ ಈ ವರೆಗೆ ಜಗತ್ತಿನ 20 ಮಹಾನಗರಗಳು ಸದಸ್ಯತ್ವ ಪಡೆದುಕೊಂಡಿದ್ದು ಇದರಲ್ಲಿ ದೇಶದ ದೆಹಲಿ, ಮುಂಬೈ, ಚೆನ್ನೈ, ಜೈಪುರ, ಕೋಲ್ಕತ್ತ ನಗರಗಳು ಸೇರಿವೆ. ಪ್ರಸ್ತುತ ಈ ಜಾಲಕ್ಕೆ ಲಂಡನ್ ಮತ್ತು ಬೆಂಗಳೂರಿನ ಮೇಯರ್ ಗಳು ಮುಖ್ಯಸ್ಥರಾಗಿರುತ್ತಾರೆ. ಈ ನಗರಗಳು ತಾಪಮಾನ ಬದಲಾವಣೆ ಹಾಗೂ ವಾಯು ಗುಣಮಟ್ಟ ಸುಧಾರಣೆಗೆ ಹೊಸ ಆಲೋಚನೆ ಹಾಗೂ ಉಪಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ.
"1985ರಲ್ಲಿ ಬೆಂಗಳೂರಿನ ಜನಸಂಖ್ಯೆ 35 ಲಕ್ಷ ಇತ್ತು. ಈಗ 1.10 ಕೋಟಿಗೆ ಮುಟ್ಟಿದೆ. ತ್ವರಿತಗತಿಯ ಬೆಳವಣಿಗೆಯಿಂದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ವಾಹನ ದಟ್ಟಣೆ, ನಿರ್ಮಾಣ ಕಾಮಗಾರಿ ಹೆಚ್ಚಾಗಿರುವುದು ವಾಯು ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ. ಬಿಬಿಎಂಪಿಯು ಸಿ40 ಜಾಲದೊಡನೆ ಅನೇಕ ವರ್ಷಗಳಿಂದ ಸಂವಹನ ನಡೆಸುತ್ತಿದೆ. ಲಂಡನ್ ನೊಂದಿಗೆ ಸಿ40 ವಾಯು ಗುಣಮಟ್ಟ ಜಾಲದ ಸಹ ನಾಯಕತ್ವ ವಹಿಸಲು ನಾವು ಆಸಕ್ತರಾಗಿದ್ದೇವೆ. ಈ ಮೂಲಕ ವಿಶ್ವದ ನಾನಾ ಮಹಾನಗರಗಳ ಮೇಯರ್ ಗಳು ಸೇರಿ ವಾಯು ಮಾಲಿನ್ಯ ತಡೆಗಟ್ಟಲು ಶ್ರಮಿಸುತ್ತೇವೆ." ಒಪ್ಪಂದಕ್ಕೆ ಸಹಿ ಹಾಕಿದ ಮೇಯರ್ ಸಂಪತ್ ರಾಜ್ ಹೇಳಿದ್ದಾರೆ.
"ಜಾಗತಿಕ ತಾಪಮಾನದಿಂದ ಜನರ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲ ಮಹಾನಗರಗಳು ಒಂದಾಗಬೇಕು. ಲಂಡನ್ ನಲ್ಲಿ ಮಾಲಿನ್ಯ ಉಂಟು ಮಾಡುವ ಕಾರ್ ಗಳಿಗೆ ವಿಷಾಂಶ ಶುಲ್ಕ ವಿಧಿಸುತ್ತೇವೆ, ವಿಷಯುಕ್ತ ಗಾಳಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಅಲ್ಲಿನ ಬಸ್ ಟ್ಯಾಕ್ಸಿಗಳನ್ನು ಸ್ವಚ್ಚ ಮಾಡಲು ಆಲ್ಟ್ರಾ ಲೋ ಎಮಿಷನ್ ಜೋನ್ ಬಳಸುತ್ತೇವೆ".ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸುವ ಉದ್ದೇಶದಿಂದ 2018ರ ಮಾರ್ಚ್ನಲ್ಲಿ ಜಾಗತಿಕ ಮಟ್ಟದ ಕಾರ್ಯಾಗಾರ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.