ಬೆಂಗಳೂರು: "ವಿಶ್ವವಿದ್ಯಾನಿಲಯಗಳ ಅಂಕಪಟ್ಟಿ ಖರೀದಿ ಹಗರಣಗಳಲ್ಲಿ ನನ್ನ ಪಾತ್ರವಿಲ್ಲ. ಹಾಗೇನಾದರೂ ನಾನು ಹಗರಣ ನಡೆಸಿದ್ದರೆ ನಾನು ಈ ಸ್ಥಾನದಲ್ಲಿ ಮುಂದುವರಿಯುವುದಿಲ್ಲ." ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಈ ಮೂಲಕ ವಿಶ್ವವಿದ್ಯಾನಿಲಯಗಳಿಗೆ ಅಗತ್ಯವಾದ ಖಾಲಿ ಅಂಕ ಪಟ್ಟಿಗಳ ಖರೀದಿಯಲ್ಲಿ ಬಹುಕೋಟಿ ರೂ.ಹಗರಣ ನಡೆಸಿದ್ದಾರೆ ಎನ್ನುವ ಯೂತ್ ಕಾಂಗ್ರೆಸ್ ಆರೋಪವನ್ನು ಸಚಿವರು ತಳ್ಳಿಹಾಕಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಸಚಿವರು "ಬಹಳ ವಿಶ್ವವಿದ್ಯಾನಿಲಯಗಳು ಕಳಪೆ ಗುಣಮಟ್ಟದ ಕಾಗದಗಳಲ್ಲಿ ಅಂಕಪಟ್ಟಿಯನ್ನು ಮುದ್ರಿಸುತ್ತಿದ್ದು ಈ ಕುರಿತಂತೆ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಒಮ್ಮೆ ಚರ್ಚೆಯಾಗಿತ್ತು.ವಿಶ್ವವಿದ್ಯಾನಿಲಯಗಳು ಪ್ರಸಕ್ತ ಬಳಸುವ ಕಾಗದದ ಬದಲಿಗೆ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ ಐಎಲ್) ನಿಂದ ಲೇಖಕ್ ಬ್ರಾಂಡ್ ಕಾಗದ ಖರೀದಿಸುವಂತೆ ಸಲಹೆ ನೀಡಲಾಗಿದೆ." ಎಂದರು.
"ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಅಂಕಪಟ್ಟಿ ದರವನ್ನು ಅವುಗಳು ಸ್ವತಂತ್ರವಾಗಿ ನಿರ್ಧಾರ ಮಾಡುತ್ತವೆ. ಅಂಕಪಟ್ಟಿ ದರ ನಿಗದಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಯಾವ ಪಾತ್ರವೂ ಇರುವುದಿಲ್ಲ, ಇದರಲ್ಲಿ ಗುತ್ತಿಗೆದಾರರ ಕೈವಾಡವಿರುವ ಸಾದ್ಯತೆ ಇದೆ. ಯಾವುದೋ ಕಾರಣಕ್ಕಾಗಿ ಯ್ರೋ ಹೇಳಿದ್ದಾರೆಂದು, ಸ್ವ ಪ್ರತಿಷ್ಠೆಗಾಗಿ ತಪ್ಪು ಮಾಹಿತಿಗಳೊಂದಿಗೆ ದೂರು ನೀಡುವುದು ಖಂಡನೀಯ, ಈ ಆರೋಪ ಸತ್ಯಕ್ಕೆ ದೂರವಾದದ್ದು, ಅಂಕಪಟ್ಟಿ ವಿಚಾರದಲ್ಲಿ ಯಾವುದೇ ಅಕ್ರಮವಾಗಲೀ, ಭ್ರಷ್ಟಾಚಾರ ಆಗಲಿ ಆಗಿಲ್ಲ" ಎಂದು ಸಚಿವ ರಾಯರೆಡ್ಡಿ ಸ್ಪಷ್ಠನೆ ನೀಡಿದ್ದಾರೆ.
ಮೊದಲೆಲ್ಲಾ ಅಂಕಪಟ್ಟಿಗಳನ್ನು ಎನ್ಎಫ್ಸಿ ತಂತ್ರಜ್ಞಾನ ಬಳಸಿ ಸಿದ್ದಪಡಿಸುತ್ತಿದ್ದರು. ಎಂಸಿಐ ಸೇರಿದಂತೆ ನಾನಾ ರಾಜ್ಯ ಸರ್ಕಾರಗಳು ಸಹ ಇದೇ ಕ್ರಮ ಅನುಸರಿಸಿವೆ. ಹಾಗೆ ತಯಾರಾಗುವ ಅಂಕಪಟ್ಟಿಗಳನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಈಗ ಮಹಾರಾಷ್ಟ್ರ ಮೂಲದ ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿದ್ದು. ಅಲ್ಲಿಂದ ಕಳಪೆ ಕಾಗದದಿಂದ ತಯಾರಾದ ಅಂಕಪಟ್ಟಿ ಸರಬರಾಜಾಗುತ್ತಿದೆ. ಇದನ್ನು ನಕಲು ಮಾಡುವುದು ಅತ್ಯಂತ ಸುಲಭ. ನಕಲಿ ಅಂಕಪಟ್ಟಿ ಜಾಲದೊಂದಿಗೆ ವಿಶ್ವವಿದ್ಯಾನಿಲಯದ ಕುಲಸಚಿವರು, ಅಧಿಕಾರಿಗಳು ಭಾಗಿಗಳಾಗಿದ್ದಾರೆ ಎಂದು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಆರೋಪ ಮಾಡಿದ್ದಿತು.