ರಾಜ್ಯ

ಬಡ್ತಿ ಮೀಸಲಾತಿ: ಮಸೂದೆ ಅನುಮೋದನೆಗೆ ರಾಷ್ಟ್ರಪತಿಗೆ ಕಳುಹಿಸಿದ ರಾಜ್ಯಪಾಲರು

Sumana Upadhyaya
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ರಾಜ್ಯ ವಿಧಾನಮಂಡಲ ಅಂಗೀಕರಿಸಿರುವ ಮಸೂದೆಯನ್ನು ರಾಜ್ಯಪಾಲ ವಜುಬಾಯಿ ವಾಲಾ ರಾಷ್ಟ್ರಪತಿ ಅವರ ಅನುಮೋದನೆಗೆ ಕಳುಹಿಸಿಕೊಟ್ಟಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿ, ಈ ಮೀಸಲಾತಿ ಅವಕಾಶವನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ವಿಧಾನಮಂಡಲ ಈಚೆಗೆ ಈ ಮಸೂದೆಯನ್ನು ಅಂಗೀಕರಿಸಿದೆ ಎಂದು ಹೇಳಿದರು.
ರಾಜ್ಯಪಾಲರು, ಮಸೂದೆಯನ್ನು ರಾಷ್ಟ್ರಪತಿಯವರ ಅವಗಾಹನೆಗೆ ಕಳುಹಿಸಿಕೊಡಲು ಕಾರಣಗಳೇನು ಎಂಬುದನ್ನು ಸಚಿವರು ತಿಳಿಸಲಿಲ್ಲ.ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಸುಮಾರು ಶೇಕಡಾ 80ರಷ್ಟು ಇಲಾಖೆಗಳಲ್ಲಿ ಹೊಸ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಜಯಚಂದ್ರ ತಿಳಿಸಿದರು. ಸುಪ್ರೀಂಕೋರ್ಟ್ ಆದೇಶವನ್ನು ಬರುವ ಜನವರಿ 15 ರೊಳಗೆ ಅನುಷ್ಠಾನಗೊಳಿಸಬೇಕಿದೆ.
ಮಸೂದೆಯನ್ನು ಈಗ ರಾಷ್ಟ್ರಪತಿ ಅವರ ಅನುಮೋದನೆಗೆ ಕಳುಹಿಸಿಕೊಟ್ಟಿರುವುದರಿಂದ, ಸುಪ್ರೀಂಕೋರ್ಟ್ ಆದೇಶ ಜಾರಿಗೊಳಿಸಬೇಕೇ ಹೇಗೆ ಎಂಬ ಬಗ್ಗೆ ಸರ್ಕಾರ ಕಾನೂನು ಅಭಿಪ್ರಾಯ ಪಡೆಯಲಿದೆ ಎಂದು ಸಚಿವರು ತಿಳಿಸಿದರು.
SCROLL FOR NEXT