ಬೆಂಗಳೂರು: ಕ್ಯಾನ್ಸರ್ ಕಾರಣದಿಂದಾಗಿ ತನ್ನ ಅಕ್ಕ ಸಾಯುತ್ತಾಳೆ ಎಂದು ತಿಳಿದು ಖಿನ್ನತೆಗೊಳಗಾದ 32 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿ ವಿಜಯನಗರ ನಿವಾಸಿ ಹರ್ಷ ಶೆಟ್ಟಿ ಎನ್ನಲಾಗಿದ್ದು ಮತ್ತು ಕಾಡುಬೀಸನಹಳ್ಳಿಯ ಹಣಕಾಸು ಸೇವಾ ಸಂಸ್ಥೆ ವೆಲ್ಸ್ ಫಾರ್ಗೋ ದಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು.
ಖಾಸಗಿ ಆಸ್ಪತ್ರೆಯಲ್ಲಿ ತನ್ನ ಸಹೋದರಿ ಆಶಾ ಶೆಟ್ಟಿ ಅವರನ್ನು ಭೇಟಿ ಮಾಡಲು ಭಾನುವಾರ ಮಣಿಪಾಲಕ್ಕೆ ತೆರಳಿದ್ದ ಹರ್ಷ ಆಕೆಯ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದೆ ಎಂದು ವೈದ್ಯರಿಂದ ಮಾಹಿತಿ ಪಡೆದಿದ್ದನು, ಆಶಾ ಅವರು ಚೇತರಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯರು ಹೇಳಿದಾಗ ಆತನಿಗೆ ಅತೀವ ದುಃಖವಾಗಿತ್ತು. ಮರಳಿ ಬೆಂಗಳೂರಿಗೆ ಬಂದ ಹರ್ಷ ಅದೇ ವಿಚಾರವನ್ನು ತನ್ನ ಪತ್ನಿ ರಮ್ಯಾ ಗೆ ಸಹ ತಿಳಿಸಿದ್ದನು. ಬುಧವಾರ ದಿನ ರಾತ್ರಿ ರಮ್ಯಾಗೆ ಹರ್ಷನ ಕೋಣೆಯಿಂದ ಸದ್ದೊಂದು ಕೇಳಿ ಬಂದಿದ್ದು ಆಕೆ ಪರಿಶೀಲಿಸಿದಾಗ ಹರ್ಷ ನೇಣು ಬಿಗಿದುಕೊಂಡಿದ್ದದ್ದು ತಿಳಿದಿದೆ. ತಕ್ಷಣ ಅಂಬ್ಯುಲೆನ್ಸ್ ಗೆ ಕರೆ ಮಾಡಿದ ರಮ್ಯಾ ಅವನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾಳೆ. ಆದರೆ ಅಲ್ಲಿಗೆ ತಲುಪುವ ವೇಳೆಗಾಗಲೇ ಹರ್ಷ ಮೃತನಾಗಿದ್ದನೆಂದು ಪೋಲೀಸರು ಹೇಳಿದರು.
ಹರ್ಷ ತಂದೆ 2002ರಲ್ಲಿ, ತಾಯಿ 2005ರಲ್ಲಿ ಮೃತರಾಗಿದ್ದು ಅದರ ನಂತರ ಅವನಿಗೆ ಹಿರಿಯ ಅಕ್ಕನೇ ಎಲ್ಲವೂ ಆಗಿದ್ದರು. ಇದೀಗ ಆಕೆಯೂ ಕ್ಯಾನ್ಸರ್ ನಿಂದ ಸಾಯುವವಳಿದ್ದಾಳೆ ಎಂದು ತಿಳಿದ ಅವನು ಖಿನ್ನತೆಗೆ ಒಳಗಾಗಿದನು ಎಂದು ಪೋಲೀಸರು ಮಾಹಿತಿ ನೀಡಿದರು. ಅಗಲಿದ ಹರ್ಷ ಗೆ ಎರಡು ವರ್ಷದ ಮಗಳಿದ್ದಾಳೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.