ಬೆಂಗಳೂರು: ಸಾಲವನ್ನು ಹಿಂತಿರುಗಿಸಲಾಗದೆ ನವ ವಿವಾಹಿತ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಂಗೇರಿಯ ಮೈಲಸಂದ್ರದಲ್ಲಿ ಕಳೆದ ರಾತ್ರಿ ನಡೆದಿದೆ. ಹುಡುಗಿಯ ತಾಯಿ ಇಂದು ಬೆಳಗ್ಗೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ದಂಪತಿಯನ್ನು 24 ವರ್ಷದ ಪ್ರವೀಣ್ ಮತ್ತು ಆತನ ಪತ್ನಿ 19 ವರ್ಷದ ಪ್ರಿಯಾ ಎಂದು ಗುರುತಿಸಲಾಗಿದೆ. ಮಂಡ್ಯ ಮೂಲದ ಪ್ರವೀಣ್ ಬೆಂಗಳೂರಿನ ಉತ್ತರಹಳ್ಳಿಯ ಪ್ರಿಯಾಳನ್ನು ಎರಡು ತಿಂಗಳ ಹಿಂದೆ ವಿವಾಹವಾಗಿದ್ದನು. ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣ ಹತ್ತಿರ ಉಪಾಹಾರ ಅಂಗಡಿಯನ್ನು ಪ್ರವೀಣ್ ನಡೆಸುತ್ತಿದ್ದನು.
ನಿನ್ನೆ ತಡರಾತ್ರಿ ತಮ್ಮ ಮನೆಯ ಕೋಣೆಯಲ್ಲಿ ಒಳಗಿನಿಂದ ಬಾಗಿಲಿನ ಚಿಲಕ ಹಾಕಿ ದಂಪತಿ ನೇಣು ಬಿಗಿದಿದ್ದಾರೆ. ಇಂದು ಬೆಳಗ್ಗೆಯಿಂದ ಪ್ರಿಯಾ ತಾಯಿ ಒಂದೇ ಸಮನೆ ಫೋನ್ ಗೆ ಕರೆ ಮಾಡುತ್ತಿದ್ದರೂ ಕೂಡ ಆ ಕಡೆಯಿಂದ ಪ್ರತಿಕ್ರಿಯೆ ಬಾರದಿದ್ದಾಗ ಮನೆಗೆ ಬಂದು ಬಾಗಿಲು ಬಡಿದರು. ಆದರೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಕಿಟಕಿ ಮೂಲಕ ಇಣುಕಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡುಬಂತು.
ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಪ್ರವೀಣ್ ಮದುವೆಗಾಗಿ ಸಾಲ ತೆಗೆದುಕೊಂಡಿದ್ದರು. ಅದನ್ನು ಹಿಂತಿರುಗಿಸಲು ಕಷ್ಟವಾಗಿತ್ತು. ಇದರಿಂದ ನೊಂದು ಈ ಕ್ರಮ ತೆಗೆದುಕೊಂಡಿದ್ದಾರೆ.
ಎರಡೂ ಕುಟುಂಬ ಸದಸ್ಯರಿಂದ ಹೇಳಿಕೆ ಪಡೆದುಕೊಂಡಿದ್ದು, ಇಬ್ಬರ ನಡುವೆ ಯಾವುದೇ ಜಗಳ, ಭಿನ್ನಾಭಿಪ್ರಾಯಗಳಿರಲಿಲ್ಲ. ಮೃತದೇಹವನ್ನು ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆಗೆ ಶವ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.ಕೆಂಗೇರಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos